ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳ ಕೊರತೆ, ಟ್ರಾಫಿಕ್ ಮತ್ತು ರಸ್ತೆ ಗುಂಡಿಗಳಂತಹ ಸಮಸ್ಯೆಗಳು ಸಾಕಷ್ಟಿವೆ ಎಂದು ಇಷ್ಟು ದಿನ ಉದ್ಯಮಿಗಳು ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದರು. ನಗರದಲ್ಲಿನ ರಸ್ತೆ ಗುಂಡಿಗಳು ಮತ್ತು ಕಸದ ಬಗ್ಗೆ ಚೀನಾ ಉದ್ಯಮಿಯೊಬ್ಬರು ತಮ್ಮನ್ನು ಪ್ರಶ್ನಿಸಿದ್ದಾರೆಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಇತ್ತೀಚೆಗಷ್ಟೇ ಪೋಸ್ಟ್ ಮಾಡಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಸಂಚಾರದಟ್ಟಣೆ ಬಗ್ಗೆ ಮಾಜಿ ಕ್ರಿಕೆಟರ್ ಸುನೀಲ್ ಜೋಶಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವಿಮಾನ ನಿಲ್ದಾಣ ಮಾರ್ಗದಲ್ಲಿ ಹಗಲಿನ ವೇಳೆಯೂ ಸರಕು ಸಾಗಣೆ ಮಾಡುವ ವಾಹನಗಳು ಸಂಚಾರ ನಡೆಸುತ್ತಿವೆ. ಇವುಗಳಿಗೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಸಂಚಾರಕ್ಕೆ ಅನುಮತಿ ಇರುವಾಗ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸಿಎಂ, ಡಿಸಿಎಂಗೆ ಪ್ರಶ್ನೆ
ಸರಕು ಸಾಗಣೆ ಮಾಡುವ ವಾಹನಗಳು ಫಾಸ್ಟ್ ಲೇನ್ಗಳನ್ನು ಬಂದ್ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ ಬರುವ ಪ್ರಯಾಣಿಕರು ಭಾರಿ ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಜನರು ಪ್ರಯಾಣಿಸಲು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸುನೀಲ್ ಜೋಶಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.