ಗೃಹ ಸಚಿವ ಜಿ ಪರಮೇಶ್ವರ್ 
ರಾಜ್ಯ

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಅನುಮತಿ ನಿರ್ಧಾರ ಕಲಬುರಗಿ ಜಿಲ್ಲಾಧಿಕಾರಿಗೆ ಬಿಟ್ಟದ್ದು!

ಸರ್ಕಾರದ ಆದೇಶವು ಆರ್‌ಎಸ್‌ಎಸ್‌ಗೆ ಸಂಬಂಧಿಸಿಲ್ಲ. ಶಾಲಾ ಮೈದಾನಗಳು ಕ್ರೀಡೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗಬೇಕು. 2013 ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ, ಅವರು ಒಳ್ಳೆಯ ಉದ್ದೇಶದಿಂದ ಆದೇಶ ಹೊರಡಿಸಿದ್ದರು.

ಬೆಂಗಳೂರು: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಕುರಿತು ರಾಜ್ಯ ಸರ್ಕಾರದ ಆದೇಶದ ಆಧಾರದ ಮೇಲೆ ಕಲಬುರಗಿ ಜಿಲ್ಲಾಧಿಕಾರಿ ಆ ಜಿಲ್ಲೆಯ ವಿವಿಧ ಸಂಸ್ಥೆಗಳ ಮೆರವಣಿಗೆಗಳು ಮತ್ತು ಇತರ ಚಟುವಟಿಕೆಗಳಿಗೆ ಅನುಮತಿ ನೀಡುತ್ತಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಗುರುವಾರ ಹೇಳಿದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಿಲ್ಲ. ಜವಾಬ್ದಾರಿಯುತ ಸರ್ಕಾರವಾಗಿ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ಯಾವುದೇ ಚಟುವಟಿಕೆಯನ್ನು ನಾವು ನೋಡಲು ಬಯಸುವುದಿಲ್ಲ ಎಂದು ಹೇಳಿದರು.

ಸರ್ಕಾರದ ಆದೇಶವು ಆರ್‌ಎಸ್‌ಎಸ್‌ಗೆ ಸಂಬಂಧಿಸಿಲ್ಲ. ಶಾಲಾ ಮೈದಾನಗಳು ಕ್ರೀಡೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗಬೇಕು. 2013 ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ, ಅವರು ಒಳ್ಳೆಯ ಉದ್ದೇಶದಿಂದ ಆದೇಶ ಹೊರಡಿಸಿದ್ದರು. ನಾವೂ ಕೂಡ ಅದೇ ಆದೇಶವನ್ನು ಹೊರಡಿಸಿದ್ದೇವೆ. ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ಸರ್ಕಾರ ಸ್ಪಷ್ಟವಾಗಿ ಆದೇಶ ಹೊರಡಿಸಿದೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಗೃಹ ಇಲಾಖೆ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ. ಇನ್ನು ಮುಂದೆ ಜಿಲ್ಲಾಡಳಿತಗಳು ಈ ಮಾರ್ಗಸೂಚಿಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದರು.

ನ.2ರಂದು ಆರ್‌ಎಸ್‌ಎಸ್ ಪಥಸಂಚಲನ ಕುರಿತು ಮಾತನಾಡಿ, ಅದೇ ದಿನ ಇನ್ನೂ ಎರಡು ಸಂಘಟನೆಗಳೂ ಕೂಡ ಅನುಮತಿ ಕೋರಿವೆ. ಈ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿಗಳ ಕುರಿತು ಮಾತನಾಡಿ, ಮುಂದಿನ ಐದು ದಿನಗಳಲ್ಲಿ ಸರ್ಕಾರವು 4,600 ಕಾನ್‌ಸ್ಟೆಬಲ್‌ಗಳನ್ನು ನೇಮಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 15,000 ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. 4,600 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿದ ನಂತರ, 5,000 ಹೆಚ್ಚುವರಿ ಕಾನ್‌ಸ್ಟೆಬಲ್‌ಗಳನ್ನು ನೇಮಿಸಲು ಸರ್ಕಾರವು ಮತ್ತೊಂದು ಅಧಿಸೂಚನೆಯನ್ನು ಹೊರಡಿಸಲಿದೆ. ಹೊಸ ನೇಮಕಾತಿಗಳಿಗೆ ತರಬೇತಿ ನೀಡಲು ಇಲಾಖೆಗೆ ಸ್ಥಳಾವಕಾಶದ ಅಗತ್ಯವಿದೆ. ಪ್ರಸ್ತುತ, 545 ಸಬ್-ಇನ್‌ಸ್ಪೆಕ್ಟರ್‌ಗಳು ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ನಾಲ್ಕು ತಿಂಗಳಲ್ಲಿ ಅವರನ್ನು ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗುವುದು. ಸರ್ಕಾರವು 400 ಹೆಚ್ಚುವರಿ ಸಬ್-ಇನ್ಸ್‌ಪೆಕ್ಟರ್‌ಗಳನ್ನು ನೇಮಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.

ಐಟಿ-ಬಿಟಿ ಮತ್ತು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಇಲಾಖೆಯು ಹೆಚ್ಚುವರಿ ಭದ್ರತೆಯನ್ನು ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಹಲವಾರು ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬಂದಿವೆ. ಇಂತಹ ಸಂದರ್ಭಗಳಲ್ಲಿ ನಾವು ರಕ್ಷಣೆ ನೀಡಬೇಕಾಗುತ್ತದೆ. ಕ್ಯಾಬಿನೆಟ್ ದರ್ಜೆಯ ಸಚಿವರಿಗೇ ನಾವು ರಕ್ಷಣೆ ನೀಡದಿದ್ದರೆ ಸರ್ಕಾರ ಇನ್ನೇಕೆ ಬೇಕು? ಎಂದು ಪ್ರಶ್ನಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Kurnool Bus Fire- ಬಸ್ಸಿನ ಸೀಟುಗಳನ್ನು ಅಕ್ರಮವಾಗಿ ಸ್ಲೀಪರ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು: ದಾಖಲೆಗಳಿಂದ ಬಹಿರಂಗ

ಜಮ್ಮು-ಕಾಶ್ಮೀರ ಭಾರತ ಅವಿಭಾಜ್ಯ ಅಂಗ, ಮಾನವ ಹಕ್ಕು ಉಲ್ಲಂಘನೆ ಕೊನೆಗೊಳಿಸಿ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಗುಡುಗಿದ ಭಾರತ

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ ನಡುವಲ್ಲೇ ನವೆಂಬರ್‌ನಲ್ಲಿ ರಾಹುಲ್ ಗಾಂಧಿ ಬೆಂಗಳೂರಿಗೆ..?

ಕರ್ನೂಲ್ ಬಸ್ ಬೆಂಕಿ ದುರಂತ: ರಾಜ್ಯದ 6 ಮಂದಿ ಬಲಿ

ತೀವ್ರ ಬೆಂಕಿ ಹೊತ್ತಿಸಿದ 'ಉತ್ತರಾಧಿಕಾರಿ' ಕಿಡಿ: ಯತೀಂದ್ರ ದಾಳಕ್ಕೆ 'ಕೈ' ನಾಯಕರು ಸಿಡಿಮಿಡಿ; ಮುಂದುವರಿದ ಡಿಕೆಶಿ 'ಮೌನಕ್ರಾಂತಿ'!

SCROLL FOR NEXT