ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗಾಗಿ ಇರುವ ಪೊಲೀಸರು ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಯಾವ ರೀತಿ ಸೌಜನ್ಯದಿಂದ ವರ್ತಿಸಬೇಕೆಂದು ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಎಂಎ ಸಲೀಂ (MA Salim) ಮಹತ್ವದ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಕಾರ್ಯವಿಧಾನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪೊಲೀಸ್ ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸಬಾರದು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು.
ಸಾರ್ವಜನಿಕರ ಕುಂದುಕೊರತೆ ತಾಳ್ಮೆಯಿಂದ ಆಲಿಸಬೇಕು. ಕಾನೂನಿನ ಪ್ರಕಾರ ಕಾಲವಿಳಂಬವಿಲ್ಲದೇ ದೂರು ದಾಖಲಿಸಬೇಕು.
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾವಾಗಲೂ ಸೌಜನ್ಯ ಮತ್ತು ಘನತೆಯಿಂದ ವರ್ತಿಸಬೇಕು.
ಯಾವ ಸಂದರ್ಭದಲ್ಲೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ, ಯಾವುದೇ ರೀತಿಯ ಬೇಡಿಕೆ ಇಡುವುದರಿಂದ ಅಥವಾ ಯಾವುದೇ ಅಕ್ರಮ ಸಹಾಯ, ಲಾಭವನ್ನು ಸ್ವೀಕರಿಸುವುದರಿಂದ ಸಂಪೂರ್ಣವಾಗಿ ದೂರವಿರಬೇಕು.
ಕರ್ತವ್ಯದ ಸಮಯದಲ್ಲಿ, ಕರ್ತವ್ಯ ಮುಗಿದ ನಂತರವೂ ನೈತಿಕವಾಗಿ ಇತರರಿಗೆ ಮಾದರಿಯಾಗುವಂತೆ ಇದ್ದು ಇಲಾಖೆಯ ನೀತಿ ನಿಯಮಗಳನ್ನು ಎತ್ತಿಹಿಡಿಯಬೇಕು.
ಸ್ಟೇಷನ್ ಹೌಸ್ ಡೈರಿಗಳು ಮತ್ತು ಕೇಸ್ ಫೈಲ್ಗಳಲ್ಲಿ ನಿಖರ ಮತ್ತು ಕೇಂದ್ರೀಕರಿಸಿದ ದಾಖಲೆಗಳನ್ನು ಕಾಯ್ದುಕೊಳ್ಳಬೇಕು ಮತ್ತು ಸಮಗ್ರವಾಗಿ ನಿರ್ವಹಿಸಬೇಕು.
ತನಿಖಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡಬೇಕು. ಯಾವುದೇ ನಾಗರಿಕರಿಗೆ ಅನಗತ್ಯವಾಗಿ ತೊಂದರೆ ನೀಡಬಾರದು.
ಸಂತ್ರಸ್ಥರು, ಮಹಿಳೆಯರು, ಹಿರಿಯ ನಾಗರಿಕರಿಗೆ ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿಯಿಂದ ಮತ್ತು ಸೂಕ್ಷ್ಮತೆಯಿಂದ ವರ್ತಿಸಬೇಕು.
ಸಾರ್ವಜನಿಕರ ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರಿಕರಿಗೆ ಮಾಹಿತಿ ನೀಡಬೇಕು. ಕರ್ತವ್ಯಕ್ಕೆ ಹಾಜರಾಗುವುದು ಮತ್ತು ಅಧಿಕೃತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತಿನಿಂದ ಸಮಯ ಪಾಲನೆ ಮಾಡಬೇಕು.
ಪೊಲೀಸ್-ಸಾರ್ವಜನಿಕ ಸಂವಹನದಲ್ಲಿ ನ್ಯಾಯಸಮ್ಮತೆಯನ್ನು ಎತ್ತಿಹಿಡಿಯಲು ಸಮವಸ್ತ್ರದ ಮೇಲೆ ಧರಿಸುವ ಕ್ಯಾಮೆರಾಗಳನ್ನು ಮತ್ತು ಲಭ್ಯವಿರುವ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು.
ಎಲ್ಲಾ ಅಧಿಕೃತ ವಿಷಯಗಳಲ್ಲಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಪೂರ್ಣ ಸಹಕಾರವನ್ನು ನೀಡಿ, ಶೋಧ, ಬಂಧನ ಅಥವಾ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕರ ಖಾಸಗಿತನ ಮತ್ತು ಘನತೆಯನ್ನು ಗೌರವಿಸಿ, ಅಧಿಕಾರದ ದುರುಪಯೋಗ ಅಥವಾ ದೌರ್ಜನ್ಯದಿಂದ ದೂರವಿರಿ ಮತ್ತು ಸದ್ವರ್ತನೆಗೆ ಮಾದರಿಯಾಗಿರಿ.
ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಪಾರದರ್ಶಕ, ಕಾನೂನುಬದ್ಧ ಮತ್ತು ಸಹಾನುಭೂತಿಯ ಪೊಲೀಸಿಂಗ್ ಅಭ್ಯಾಸಗಳ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು.
ಪೊಲೀಸ್ ಕಾರ್ಯಗಳ ಮೇಲೆ ಪ್ರಭಾವ ಬೀರುವ ಅಥವಾ ಭ್ರಷ್ಟಗೊಳಿಸುವ ಯಾವುದೇ ಪ್ರಯತ್ನಗಳು ಕಂಡುಬಂದಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ.
ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿಸಿದ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳದೇ, ಠಾಣೆಯಲ್ಲಿ ಶೂನ್ಯ ಪ್ರವ. ವರದಿಯನ್ನು ದಾಖಲಿಸಿ ಆ ನಂತರ ವ್ಯಾಪ್ತಿಯ ಆಧಾರದ ಮೇಲೆ ಸಂಬಂಧಪಟ್ಟ ಠಾಣೆಗ ದೂರನ್ನು ವರ್ಗಾಯಿಸುವುದು.
ಮಹಿಳೆಯರನ್ನು ಸಂಜೆ 6 ಗಂಟೆಯ ನಂತರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಅಥವಾ ಹೇಳಿಕೆಯನ್ನು ನೀಡಲು ಕರೆತರಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.