ಮೈಸೂರು: ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ ಕಾಪಾಡಿ ಇಬ್ಬರು ಸಹೋದರರು ನೀರು ಪಾಲಾಗಿರುವ ಘಟನೆ ಮೈಸೂರಿನ ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ. ಮೃತರಿಬ್ಬರು ಸಹೋದರರಿಬ್ಬರ ಮಕ್ಕಳಾಗಿದ್ದು ಬಡಗಲಹುಂಡಿ ಗ್ರಾಮದ 25 ವರ್ಷದ ನಂದನ್ ಮತ್ತು 20 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. ವರುಣ ನಾಲೆಯಲ್ಲಿ ಮಂಜು ಎಂಬಾತ ಈಜಲು ಹೋಗಿದ್ದಾನೆ. ಈ ವೇಳೆ ಮಂಜು ಮುಳುಗುತ್ತಿದ್ದುದ್ದನ್ನು ಗಮನಿಸಿದ ನಂದನ್ ಮತ್ತು ರಾಕೇಶ್ ಆತನನ್ನು ಕಾಪಾಡಲು ನಾಲೆಗೆ ಹಾರಿದ್ದಾರೆ. ಅದೃಷ್ಟವಶಾತ್ ಇಬ್ಬರು ಮಂಜುವನ್ನು ಕಾಪಾಡಿದ್ದಾರೆ. ನಂತರ ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.