ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೆಲಸ ಹಂಚಿಕೆ ಮಾಡಲಾಗಿದ್ದು, ಗ್ರಂಥಾಲಯದಲ್ಲಿ ಕ್ಲರ್ಕ್ ಕೆಲಸ ನೀಡಲಾಗಿದೆ.
ಜೈಲು ಅಧಿಕಾರಿಗಳ ಪ್ರಕಾರ, ವಿಚಾರಣಾಧೀನ ಕೈದಿಗಳು ಮತ್ತು ಸಜಾಬಂದಿಗಳಿಗೆ ಗ್ರಂಥಾಲಯದಿಂದ ಪುಸ್ತಕ ವಿತರಣೆ ಮಾಡುವುದು, ಯಾವ ಕೈದಿಗೆ ಯಾವ ಪುಸ್ತಕ ನೀಡಲಾಗಿದೆ ಎಂಬುದನ್ನು ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಪ್ರಜ್ವಲ್ಗೆ ನೀಡಲಾಗಿದೆ.
'ಅವರು ನಿಗದಿತ ಕರ್ತವ್ಯಗಳನ್ನು ಪೂರ್ಣಗೊಳಿಸಿದರೆ, ಪ್ರತಿ ದಿನದ ಕೆಲಸಕ್ಕೆ 522 ರೂ. ಕೂಲಿಯನ್ನು ನಿಗದಿಪಡಿಸಲಾಗಿದೆ. ಜೈಲು ನಿಯಮಗಳಿಗೆ ಅನುಸಾರವಾಗಿ, ಜೀವಾವಧಿ ಶಿಕ್ಷೆಗೊಳಗಾದವರ ಕೌಶಲ್ಯ ಮತ್ತು ಇಚ್ಛೆಯನ್ನು ಅವಲಂಬಿಸಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ' ಎಂದು ಜೈಲಿನ ಅಧಿಕಾರಿಯೊಬ್ಬರು ಭಾನುವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಎಂಜಿನಿಯರಿಂಗ ಪಧವೀಧರನಾಗಿರುವ ಪ್ರಜ್ವಲ್ ರೇವಣ್ಣ ಅವರು ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಆಸಕ್ತಿ ತೋರಿಸಿದ್ದರು. ಆದರೆ ಜೈಲು ಆಡಳಿತವು ಅವರನ್ನು ಗ್ರಂಥಾಲಯದಲ್ಲಿ ಇರಿಸಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ. ಅವರು ಈಗಾಗಲೇ ಒಂದು ದಿನ ಈ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.
ಕೈದಿಗಳು ಸಾಮಾನ್ಯವಾಗಿ ವಾರಕ್ಕೆ ಮೂರು ದಿನಗಳಂತೆ ತಿಂಗಳಿಗೆ ಕನಿಷ್ಠ 12 ದಿನ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡಿದ ದಿನದಂದು ಮಾತ್ರ ಕೂಲಿ ನೀಡಲಾಗುತ್ತದೆ. ಆದರೆ, ಪ್ರಜ್ವಲ್ ರೇವಣ್ಣ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಮತ್ತು ವಕೀಲರನ್ನು ಭೇಟಿ ಮಾಡುವ ದಿನಗಳಂದು ಹಣ ನೀಡಲಾಗುವುದಿಲ್ಲ.
ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್ 2ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.