ಹಾವೇರಿ: ರಾಜ್ಯ ಸರ್ಕಾರವು ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ನಷ್ಟ ಸಮೀಕ್ಷೆಗಳನ್ನು ನಡೆಸಿ ರೈತರಿಗೆ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಬೆಳೆ ನಷ್ಟದ ಕುರಿತು ವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬಹುದು. NDRF ಮತ್ತು SDRF ಮಾನದಂಡಗಳ ಅಡಿಯಲ್ಲಿ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.
ಕಳೆದ ಎರಡು ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಆಗಿದೆ.ರೈತರ ಬೆಳೆ ನಷ್ಟ ವಾಗಿದೆ, ಬಡವರ ಮನೆ ಬಿದ್ದಿವೆ. ಇಷ್ಟೆಲ್ಲಾ ಆದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದರು. ಮೊನ್ನೆ ಕಾಟಾಚಾರಕ್ಕೆ ಒಂದು ಸಭೆ ಬಿಟ್ಟರೆ ಸಿಎಂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಬೆಳೆ ನಷ್ಟದ ವ್ಯಾಪ್ತಿ, ಕ್ಷೇತ್ರದ ಬಗ್ಗೆ ಪ್ರಾಥಮಿಕ ಸಮೀಕ್ಷೆ ಸರಿಯಾಗಿ ಮಾಡೇ ಇಲ್ಲ. ಗ್ರಾ.ಪಂ ಮಟ್ಟದಲ್ಲಿ ವಿಲೇಜ್ ಅಕೌಂಟೆಂಟ್ ಸರ್ವೆ ಮಾಡಬೇಕು. ಅರ್ಜಿ ಕೊಟ್ಟಲ್ಲಿ ಮಾತ್ರ ಸರ್ವೆ ಮಾಡಿದ್ದಾರೆ, ವೈಜ್ಞಾನಿಕವಾಗಿ ಬೆಳೆಹಾನಿ ಸರ್ವೆ ಆಗೇ ಇಲ್ಲ ಎಂದರು.
ಹಾವೇರಿ ಜಿಲ್ಲೆಯಲ್ಲಿ 23,536 ಹೆಕ್ಟೇರ್ ಪ್ರದೇಶ ಹಾವೇರಿ ಜಿಲ್ಲೆಯಲ್ಲಿ ನಷ್ಟವಾಗಿದೆ. ಇದಕ್ಕಿಂತ ವ್ಯಾಪಕವಾಗಿ ನಷ್ಟವಾಗಿದೆ. ಕೃಷಿ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ. ಮನೆ ಬಿದ್ದ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ನಮ್ ಸರ್ಕಾರ ಮನೆ ಬಿದ್ದರೆ 5 ಲಕ್ಷ ಕೊಡ್ತಾ ಇತ್ತು.
ಎನ್ಡಿಆರ್ಎಫ್ ನಿಯಮದ ಪ್ರಕಾರವೂ ಪರಿಹಾರ ಕೊಟ್ಟಿಲ್ಲ. ಮನೆಗೆ ನೀರು ಹೊಕ್ಕಾಗ 10000 ಕೊಡಬೇಕು, ಇವರು ಕೊಟ್ಟೇ ಇಲ್ಲ. ಕೃಷಿ ಬಗ್ಗೆ ಅತ್ಯಂತ ನಿರ್ಲಕ್ಷ್ಯ ನಿಷ್ಕಾಳಜಿ ವಹಿಸಿದ್ದಾರೆ. ರೈತರಿಗೆ ನಾವು ಕೊಟ್ಟ ಕಾರ್ಯಕ್ರಮ ಬಂದ್ ಮಾಡಿದರು. ಬೀಜ ಗೊಬ್ಬರದ ವಿಚಾರದಲ್ಲಿ ಸಂಪೂರ್ಣವಾಗಿ ಮೋಸ ಮಾಡ್ತಿದಾರೆ.
ರೈತ ವಿರೋಧಿ ನಿಲುವು ತಾಳಿದ್ದಾರೆ. ತಪ್ಪಿತಸ್ಥ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ತಗೊಬೇಕು. ಬರುವ ಸೋಮವಾರ ರೈತರ ಸಮಸ್ಯೆಗಳ ವಿಚಾರವಾಗಿ ಬೃಹತ್ ಪ್ರತಿಭಟನೆ ಮಾಡ್ತೀವಿ ಎಂದರು. ಮದ್ದೂರು ಕಲ್ಲು ತೂರಾಟ ಪ್ರಕರಣ ವಿಚಾರವಾಗಿ ಕಾಂಗ್ರೆಸ್ನವರಿಗೆ ಓಲೈಕೆ ರಾಜಕೀಯ ಬಿಟ್ಟರೆ ಬೇರೆ ಗೊತ್ತಿಲ್ಲ.
ಅದೇ ರಸ್ತೆಯಲ್ಲಿ ಈದ್ ಮಿಲಾದ್ ಆಯ್ತು, ಏನೂ ಆಗಲಿಲ್ಲ. ಆದರೆ ನಮಗೆ ವಿದ್ಯುತ್ ಬಂದ್ ಮಾಡಿ ಕಲ್ಲು ತೂರಾಟ ಮಾಡಿದರು. ಗೂಂಡಾಗಳಿಗೆ ಸರ್ಕಾರದ ಅಭಯ ಇದೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಆದ ಕೇಸ್ ತಗೆದರು. ಪೊಲೀಸರಿಗೇ ರಕ್ಷಣೆ ಇಲ್ಲ. ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ ಎಂದರು.