ಬೆಂಗಳೂರು: ನಗರದ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಪ್ರತಿಷ್ಠಿತ ರೋಲ್ಸ್-ರಾಯ್ಸ್ ಕಂಪನಿ ಸ್ಥಾಪಿಸಿರುವ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವನ್ನು (ಜಿಸಿಸಿ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದ ವೈಮಾಂತರಿಕ್ಷ ಉದ್ಯಮ ವಲಯದ ಕಾರ್ಯ ಪರಿಸರವನ್ನು ಸೃಷ್ಟಿಸುವಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಮೊದಲಿನಿಂದಲೂ ನಮ್ಮ ಜತೆಗಿದೆ ಎಂದು ಹೇಳಿದರು.
ರಾಜ್ಯದ ವೈಮಾಂತರಿಕ್ಷ ಉದ್ಯಮ ವಲಯದ ಕಾರ್ಯ ಪರಿಸರವನ್ನು ಸೃಷ್ಟಿಸುವಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಮೊದಲಿನಿಂದಲೂ ಜೊತೆಯಾಗಿದೆ. ನೂತನ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವು ಕಂಪನಿಯ ಪಾಲಿಗೆ ಇಂತಹ ಅತ್ಯಂತ ದೊಡ್ಡ ಮತ್ತು ಅತ್ಯಾಧುನಿಕ ಕೇಂದ್ರವಾಗಿದೆ. ಇಂತಹ ಉಪಕ್ರಮಗಳಿಂದಾಗಿ ಬೆಂಗಳೂರು ನಗರವು ವೈಮಾಂತರಿಕ್ಷ ವಲಯದ ಹೂಡಿಕೆಯಲ್ಲಿ ಜಗತ್ತಿನ ಮೊದಲ ಮೂರು ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದು ತಿಳಿಸಿದರು.
ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಬೆಂಗಳೂರು ವಿಶ್ವದ ಅಗ್ರ ಮೂರು ಏರೋಸ್ಪೇಸ್ ನಗರಗಳಲ್ಲಿ ಒಂದಾಗಿದೆ. ನಮ್ಮ ರಾಜ್ಯವು ಏರೋಸ್ಪೇಸ್ ಮತ್ತು ರಕ್ಷಣಾ ಮೌಲ್ಯ ಸರಪಳಿ ಸಾಮರ್ಥ್ಯ ಹೊಂದಿರುವ ಕಂಪನಿಗಳನ್ನು ಹೊಂದಿದೆ. ರೋಲ್ಸ್ ರಾಯ್ಸ್ ಕಂಪನಿಯು ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಎಂಜಿನಿಯರುಗಳನ್ನು ಹೊಂದಿದೆ. ಈ ಪೈಕಿ ಹೆಚ್ಚಿನವರು ಕರ್ನಾಟಕದಿಂದ ಕೆಲಸ ಮಾಡುತ್ತಿದ್ದಾರೆ, ಈ ಕಂಪನಿಯ ಜತೆಗೆ ಏಕಸ್, ಕಾಲಿನ್ಸ್ ಏರೋಸ್ಪೇಸ್, ವಿಪ್ರೋ, ಮಹೀಂದ್ರಾ, ಬೋಯಿಂಗ್, ಏರ್ಬಸ್ ಮತ್ತು ಪಿಕ್ಸೆಲ್ ಕಂಪನಿಗಳೂ ರಾಜ್ಯದಲ್ಲಿ ನೆಲೆಯೂರಿವೆ. ಇವು ಕ್ರಮವಾಗಿ ಪವರ್ ಸಿಸ್ಟಂ ಮತ್ತು ಪ್ರೊಪಲ್ಶನ್, ಸ್ಟ್ರಕ್ಚರಲ್ ಮತ್ತು ಮೆಕ್ಯಾನಿಕಲ್ ಬಿಡಿಭಾಗಗಳು, ವಿಶೇಷ ಪರಿಣತಿಯ ತಂತ್ರಜ್ಞಾನಗಳಲ್ಲಿ ಸಾಧನೆ ಮಾಡಿವೆ ಎಂದು ವಿವರಿಸಿದರು.
ತಯಾರಿಕಾ ಚಟುವಟಿಕೆಗಳನ್ನು ಆಧರಿಸಿದ ಆರ್ಥಿಕತೆಯಲ್ಲಿ ವೈಮಾಂತರಿಕ್ಷ ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯು ಆಕರ್ಷಕವಾಗಿದ್ದು, ಹೂಡಿಕೆದಾರರಿಗೆ ಒಳ್ಳೆಯ ಪ್ರೋತ್ಸಾಹನಾ ಭತ್ಯೆಗಳನ್ನು ಒಳಗೊಂಡಿದೆ. ಇದರ ಜತೆಗೆ ನಮ್ಮಲ್ಲಿರುವ ಸಂಶೋಧನಾ ಸಂಸ್ಕೃತಿಯು ಇದಕ್ಕೆ ಪೂರಕವಾಗಿ, ಬಲ ತುಂಬುತ್ತಿದೆ ಎಂದು ಹೇಳಿದರು.
ರೋಲ್ಸ್ ರಾಯ್ಸ್ನ ಮುಖ್ಯ ಹಣಕಾಸು ಅಧಿಕಾರಿ ಹೆಲೆನ್ ಮೆಕ್ಕೇಬ್ ಅವರು ಮಾತನಾಡಿ, 1956 ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆಗಿನ ಒಪ್ಪಂದದಿಂದಲೇ ಕರ್ನಾಟಕದಲ್ಲಿ ಕಂಪನಿಯ ಕಾರ್ಯಾಚರಣೆ ಆರಂಭಿಸಿತ್ತು. 1,400 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಎಂಜಿನ್ಗಳು ಭಾರತೀಯ ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಸೈನ್ಯದ ವಿವಿಧ ವೇದಿಕೆಗಳಿಗೆ ಶಕ್ತಿ ನೀಡುತ್ತವೆ. ಜಾಗತಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡುತ್ತಿರುವ 2,000 ಹೆಚ್ಚು ಕೌಶಲ್ಯಪೂರ್ಣ ಎಂಜಿನಿಯರ್ಗಳು ಸೇರಿದಂತೆ 3,000 ಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಾರೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕೆಮರಾನ್ ಉಪಸ್ಥಿತರಿದ್ದರು.