ಹಾಸನ: ಮಲೆನಾಡು ಭಾಗದಲ್ಲಿ ಆನೆ-ಮಾನವ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದ್ದು, ಆನೆಯ ದಾಳಿಯಿಂದ ಆನೆ ಕಾರ್ಯಪಡೆ (ಇಟಿಎಫ್) ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಸಕಲೇಶಪುರ ತಾಲ್ಲೂಕಿನ ಮತ್ತೂರು ಗ್ರಾಮದ ಬಳಿ ನಡೆದಿದೆ.
ಗ್ರಾಮಸ್ಥರಿಂದ ಬಂದ ದೂರುಗಳ ಹಿನ್ನೆಲೆ, ಆನೆಗಳ ಚಲನವಲನವನ್ನು ಗಮನಿಸಲು ಯುವರಾಜ್ ಮತ್ತು ಪ್ರಸನ್ನ ಅವರು ಪ್ರತ್ಯೇಕವಾಗಿ ಬೈಕ್ನಲ್ಲಿ ತೆರಳಿದ್ದರು. ಬೆಳಗ್ಗೆ ಸುಮಾರು 6.30ರ ವೇಳೆಗೆ ಏಕಾಏಕಿ ಆನೆ ಎದುರಾಗಿದ್ದು, ದಾಳಿ ನಡೆಸಿದೆ.
ಅಪಾಯವನ್ನು ಅರಿತ ಸಿಬ್ಬಂದಿ ತಕ್ಷಣ ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಆನೆ ನೆಲದಲ್ಲಿ ಬಿದ್ದಿದ್ದ ಎರಡು ಬೈಕ್ಗಳನ್ನು ನಾಶಪಡಿಸಿದೆ. ಈ ನಡುವೆ ಓಡುವ ವೇಳೆ ಇಬ್ಬರು ಸಿಬ್ಬಂದಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಆನೆಗಳ ಕಾಟವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ತಕ್ಷಣ ಶಾಶ್ವತ ಪರಿಹಾರ ಕ್ರಮಗಳನ್ನು ಜಾರಿಗೆ ತರಬೇಕೆಂದೂ ಒತ್ತಾಯಿಸಿದ್ದಾರೆ.
ಸ್ಥಳೀಯ ರೈತ ಮೋಹನ್ ಕುಮಾರ್ ಮಾತನಾಡಿ, “ಆನೆ ಕಾರ್ಯಪಡೆ ಸಿಬ್ಬಂದಿಗೆ ಸಮರ್ಪಕ ರಕ್ಷಣೆ ಹಾಗೂ ಸೌಲಭ್ಯ ಒದಗಿಸಬೇಕು. ಆನೆಗಳ ಚಲನವಲನವನ್ನು ಗಮನಿಸಲು ಸಂಪೂರ್ಣ ಸೌಲಭ್ಯಗಳಿರುವ ವಾಹನಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆಹಾರಕ್ಕಾಗಿ ಆನೆಗಳು ಮಾನವ ವಾಸಸ್ಥಳಗಳಿಗೆ ಬರುತ್ತಿರುವುದು ಅಪಾಯವನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದಕ್ಕೂ ನಡುವೆ, ಬಂಡೀಪುರ ಪ್ರದೇಶದಲ್ಲೂ ಮತ್ತೊಂದು ಘಟನೆ ನಡೆದಿದ್ದು, ಕಾಡಿನಿಂದ ಹೊರಬಂದ ಕಾಡಾನೆಗಳ ಗುಂಪು ಅರಣ್ಯ ಇಲಾಖೆಯ ಜೀಪ್ ಮೇಲೆ ದಾಳಿ ನಡೆಸಿದೆ. ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ನುಗು ಜಲಾಶಯದ ಸಮೀಪ ಈ ಘಟನೆ ಸಂಭವಿಸಿದೆ.
ಆನೆಗಳನ್ನು ಮತ್ತೆ ಕಾಡಿನೊಳಗೆ ಓಡಿಸುವ ವೇಳೆ ಅವು ಆಕ್ರೋಶದಿಂದ ವಾಹನದ ಮೇಲೆ ದಾಳಿ ನಡೆಸಿದ್ದು, ಇದರಿಂದ ಅರಣ್ಯ ಇಲಾಖೆಯ ಜೀಪ್ ಹಾನಿಗೊಳಗಾಗಿದೆ. ಚಾಲಕ ಅದೃಷ್ಟವಶಾತ್ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.
ಈ ಘಟನೆಗಳಿಂದಾಗಿ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದ್ದು, ಮಾನವ-ಪ್ರಾಣಿ ಸಂಘರ್ಷ ತೀವ್ರಗೊಳ್ಳುತ್ತಿದೆ. ಸಫಾರಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.