ಶೇ.50ರಷ್ಟು ರಿಯಾಯಿತಿ: 18 ದಿನಗಳಲ್ಲಿ 8.82 ಲಕ್ಷ ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳ ಇತ್ಯರ್ಥ; 26.37 ಕೋಟಿ ರೂ ಸಂಗ್ರಹ

ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ, ಸಂಖ್ಯೆ: TD 27 TDO 2023ರ ಆದೇಶದಂತೆ ಜೂನ್ 21ರಿಂದ ಈ ರಿಯಾಯಿತಿ ಯೋಜನೆ ಜಾರಿಗೆ ಬಂದಿದೆ.
traffic e-challans
ಟ್ರಾಫಿಕ್ ದಂಡ ರಿಯಾಯಿತಿ ಯೋಜನೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕರ್ನಾಟಕ ಸರ್ಕಾರ ಬಾಕಿ ಉಳಿದಿದ್ದ ಟ್ರಾಫಿಕ್ ಇ-ಚಲನ್ ದಂಡದ ಮೊತ್ತಕ್ಕೆ ಶೇ.50 ರಿಯಾಯಿತಿ ಘೋಷಿಸಿದ ಬಳಿಕ ಕೇವಲ 18 ದಿನಗಳಲ್ಲಿ 8.82 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ 26.37 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ, ಸಂಖ್ಯೆ: TD 27 TDO 2023ರ ಆದೇಶದಂತೆ ಜೂನ್ 21ರಿಂದ ಈ ರಿಯಾಯಿತಿ ಯೋಜನೆ ಜಾರಿಗೆ ಬಂದಿದೆ. ಪೊಲೀಸ್ ಇಲಾಖೆಯಿಂದ ದಾಖಲಾಗಿದ್ದ ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳಿಗೆ ಈ ಯೋಜನೆ ಅನ್ವಯವಾಗುತ್ತಿದೆ.

ರಾಜ್ಯದಲ್ಲಿ ಹಲವು ವರ್ಷಗಳಿಂದ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಪ್ರಕರಣಗಳು ಬಾಕಿ ಉಳಿದಿದ್ದವು. ಬೆಂಗಳೂರೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಇ-ಚಲನ್ ದಂಡಗಳು ಪಾವತಿಯಾಗದೆ ಉಳಿದಿದ್ದವು. ದಂಡ, ಹೆಚ್ಚುವರಿ ಶುಲ್ಕ ಹಾಗೂ ಬಡ್ಡಿ ಹೆಚ್ಚಾಗುತ್ತಿದ್ದ ಕಾರಣ ಅನೇಕ ವಾಹನ ಮಾಲೀಕರು ಪಾವತಿಯನ್ನು ಮುಂದೂಡುತ್ತಿದ್ದರು.

traffic e-challans
ಟ್ರಾಫಿಕ್ ಫೈನ್​​ಗೆ ಶೇ. 50 ರಷ್ಟು ಡಿಸ್ಕೌಂಟ್: ಬೆಂಗಳೂರಿನಲ್ಲಿ ನಾಲ್ಕೇ ದಿನದಲ್ಲಿ 6 ಕೋಟಿ ರೂ. ದಂಡ ಸಂಗ್ರಹ!

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ಒಂದು ಬಾರಿಯ ಕ್ಷಮಾದಾನ (Amnesty) ಯೋಜನೆಯಡಿ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ಘೋಷಿಸಿತ್ತು. ಬಾಕಿ ಪ್ರಕರಣಗಳ ಇತ್ಯರ್ಥ, ನ್ಯಾಯಾಲಯಗಳ ಮೇಲಿನ ವ್ಯಾಜ್ಯಗಳ ಒತ್ತಡ ಕಡಿಮೆ ಮಾಡುವುದು, ಸಂಚಾರ ಶಿಸ್ತು ಸುಧಾರಿಸುವುದು ಹಾಗೂ ಸರ್ಕಾರದ ಆದಾಯ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಈ ಹಿಂದೆ ಮಹಾರಾಷ್ಟ್ರ, ದೆಹಲಿ ಹಾಗೂ ತೆಲಂಗಾಣ ರಾಜ್ಯಗಳಲ್ಲಿಯೂ ಇಂತಹ ಕ್ಷಮಾದಾನ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಲಕ್ಷಾಂತರ ಬಾಕಿ ಟ್ರಾಫಿಕ್ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನೆರವಾಗಿತ್ತು.

ಕರ್ನಾಟಕ ಪೊಲೀಸ್ ಇಲಾಖೆ ವಾಹನ ಮಾಲೀಕರಿಗೆ ಎಸ್‌ಎಂಎಸ್ ಹಾಗೂ ಇತರ ಸೂಚನೆಗಳನ್ನು ಕಳುಹಿಸುವ ಮೂಲಕ, ರಿಯಾಯಿತಿ ಅವಧಿಯಲ್ಲಿ ಆನ್‌ಲೈನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಸಂಚಾರ ಪೊಲೀಸ್ ಠಾಣೆಗಳ ಮೂಲಕ ಬಾಕಿ ದಂಡವನ್ನು ಪಾವತಿಸುವಂತೆ ಮನವಿ ಮಾಡುತ್ತಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜೂನ್ 21ರಿಂದ ಜುಲೈ 8ರವರೆಗೆ ವಿವಿಧ ಪಾವತಿ ವಿಧಾನಗಳ ಮೂಲಕ ಒಟ್ಟು 8,82,290 ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳು ಇತ್ಯರ್ಥಗೊಂಡಿವೆ. ಈ 18 ದಿನಗಳ ಅವಧಿಯಲ್ಲಿ ಸರ್ಕಾರ 26,37,79,300 (26.37 ಕೋಟಿ)ರೂ ಮೊತ್ತವನ್ನು ಸಂಗ್ರಹಿಸಿದೆ.

ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇನ್ನೂ ಬಾಕಿ ಇ-ಚಲನ್ ಹೊಂದಿರುವ ವಾಹನ ಮಾಲೀಕರು ಯೋಜನೆ ಮುಕ್ತಾಯವಾಗುವ ಮುನ್ನವೇ ಈ ರಿಯಾಯಿತಿಯ ಪ್ರಯೋಜನ ಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿಗದಿತ ಅವಧಿ ಮುಗಿದ ಬಳಿಕ ಪೂರ್ಣ ಪ್ರಮಾಣದ ದಂಡ, ಹೆಚ್ಚುವರಿ ಶುಲ್ಕ ಹಾಗೂ ಅಗತ್ಯವಿದ್ದರೆ ಕಾನೂನು ಕ್ರಮಗಳು ಮತ್ತೆ ಜಾರಿಗೆ ಬರಲಿವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com