ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಏಪ್ರಿಲ್ 14ರೊಳಗೆ ಭೂ ವಿವಾದಕ್ಕೆ ಪರಿಹಾರ ದೊರೆಯದಿದ್ದರೆ ವಿಷ ಕುಡಿಯುತ್ತೇನೆಂದು ಸಚಿವ ಕೆ.ಹೆಚ್. ಮುನಿಯಪ್ಪ ಅವರ ಎದುರೇ ರೈತನೊಬ್ಬ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಗುರುವಾರ ನಡೆದಿದ್ದು, ಇದರ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿ ನಡೆದ ಸಭೆಯ ಬಳಿಕ ಈ ಘಟನೆ ನಡೆದಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಡಾ. ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮಗಳ ಸಿದ್ಧತೆ ಕುರಿತು ಸಚಿವ ಮುನಿಯಪ್ಪ ಸಭೆ ನಡೆಸುತ್ತಿದ್ದರು. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಭೆ ಮುಗಿದು ಸಚಿವರು ಹೊರಬಂದ ವೇಳೆ ಮುದ್ದಕುರ್ಕಿಯ ನಿವಾಸಿ ಅಂಜನಪ್ಪ (55) ಎಂಬ ರೈತ, ಭೂ ವಿವಾದ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪರಿಹಾರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇನ್ನೂ ಸಮಸ್ಯೆ ಬಗೆಹರಿಸಲಿಲ್ಲದಿದ್ದರೆ ವಿಷ ಕುಡಿಯುತ್ತೇನೆ” ಎಂದು ಕೂಗುತ್ತಾ ಕೈಯಲ್ಲಿ ಹಿಡಿದಿದ್ದ ಬಾಟಲಿಯನ್ನು ಸಚಿವರಿಗೆ ತೋರಿಸಿದರು.
ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಅಂಜನಪ್ಪ ಅವರನ್ನು ಸಮಾಧಾನಪಡಿಸಿದ ಸ್ಥಳದಿಂದ ಕರೆದೊಯ್ದರು. ಘಟನೆಯಿಂದ ಕೆಲಕಾಲ ಗೊಂದಲ ಉಂಟಾದರೂ, ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.