ಉಡುಪಿ: ಉಡುಪಿಯ ಕೊಡವೂರಿನಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ 60 ವರ್ಷದ ವೃದ್ಧ ವ್ಯಕ್ತಿಯೊಬ್ಬ 3 ದಿನಗಳ ಸುದೀರ್ಘ ಹೋರಾಟದ ಬಳಿಕ ಪವಾಡ ಸದೃಶವಾಗಿ ರಕ್ಷಣೆಯಾಗಿದ್ದಾರೆ.
60 ವರ್ಷದ ಶ್ರೀನಿವಾಸ ಭಟ್ ಅವರು ಪವಾಡ ಸದೃಶವಾಗಿ ರಕ್ಷಣೆಗೊಳಗಾಗಿದ್ದಾರೆ. ಶ್ರೀನಿವಾಸ್ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು ತೆರಳಿದ್ದಾರೆ. ಬಾವಿಗೆ ಹಾಕಿದ್ದ ಪಂಪ್ನಲ್ಲಿ ಕಸ ತುಂಬಿದ್ದು, ಅದನ್ನ ಸ್ವಚ್ಛ ಮಾಡಲು ಬಾವಿ ಕಡೆಗೆ ತೆರಳಿದ್ದಾರೆ. ಪೈಪ್ ಎಳೆಯಲು ಹೋಗಿ ಹಗ್ಗ ತುಂಡಾಗಿದೆ. ಈ ವೇಳೆ ಅವರು ಕೂಡ ಆಯತಪ್ಪಿ ಸುಮಾರು 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.
ಸುತ್ತ-ಮುತ್ತ ಯಾರು ಇಲ್ಲದ ಕಾರಣ, ಕೂಗಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾವಿಯಲ್ಲಿದ್ದ ಪೈಪ್ ಹಿಡಿದು ಶ್ರೀನಿವಾಸ್ ಅವು ಮೂರು ದಿನಗಳ ಕಾಲ ಅಲ್ಲಿಯೇ ಗಟ್ಟಿಯಾಗಿ ಕೂತಿದ್ದಾರೆ.
ಈ ನಡುವೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದ ಹಿನ್ನೆಲೆಯಲ್ಲಿ ಸಿಲಿಂಡರ್ ವಿತರಿಸಲು ಏಜೆನ್ಸಿ ಸಿಬ್ಬಂದಿ ಮನೆಗೆ ಬಂದಿದ್ದಾರೆ. ಸಿಲಿಂಡರ್ ನೀಡಲು ಒಟಿಪಿ (OTP) ಕೇಳುವ ಉದ್ದೇಶದಿಂದ ಹುಡುಕಾಡಿದಾಗ ಬಾವಿಯ ಒಳಗಿನಿಂದ ವೃದ್ಧ ವ್ಯಕ್ತಿಯ ಕಿರುಚಾಟ ಕೇಳಿಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಗ್ಯಾಸ್ ಸಿಬ್ಬಂದಿ ಮತ್ತು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡವು ಹರಸಾಹಸ ಪಟ್ಟು ವ್ಯಕ್ತಿಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದೆ.
ಪ್ರಸ್ತುತ ಶ್ರೀನಿವಾಸ ಆಚಾರ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮೂಲಕ ಗ್ಯಾಸ್ ಸಿಲಿಂಡರ್ ನೀಡಲು ಬಂದ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಒಂದು ಜೀವ ಉಳಿದಂತಾಗಿದೆ.