ಚಿಕ್ಕಮಗಳೂರು: ಇತ್ತೀಚಿಗೆ ಕೊಡಗಿಗೆ ಚಾರಣಕ್ಕೆ ಆಗಮಿಸಿದ್ದ ಆಗಮಿಸಿದ್ದ ಶರಣ್ಯಾ ಎಂಬ ಕೇರಳದ ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡ ಬೆನ್ನಲ್ಲೇ ಇದೀಗ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮುಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 14 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬಾಲಕಿಯನ್ನು ಕೇರಳದ ಪಾಲಕ್ಕಾಡ್ ಮೂಲದ ನಂದನಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಪೋಷಕರು ಮತ್ತು ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ನಿನ್ನೆ ಸಂಜೆ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಬಳಿ ಈ ಘಟನೆ ಸಂಭವಿಸಿದೆ. ಬಾಲಕಿಯ ಕುಟುಂಬದವರು ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಮಾಣಿಕ್ಯಧಾರಾ ಜಲಪಾತದ ಸಮೀಪವಿರುವ ಬೆಟ್ಟದ ಪ್ರದೇಶದಲ್ಲಿ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ನಂದನಾ ತಂಡದಿಂದ ಬೇರ್ಪಟ್ಟಿದ್ದಾಳೆ. ಆರಂಭದಲ್ಲಿ ಆಕೆ ಎಲ್ಲೋ ಹತ್ತಿರದಲ್ಲಿ ಇರಬಹುದು ಎಂದು ಭಾವಿಸಿದ್ದ ಪೋಷಕರು ಮತ್ತು ತಂಡದ ಸದಸ್ಯರು, ಸಮಯ ಕಳೆದಂತೆ ಗಾಬರಿಗೊಂಡಿದ್ದಾರೆ.
ಸ್ಥಳೀಯರು ಮತ್ತು ಇತರ ಪ್ರವಾಸಿಗರು ರಾತ್ರಿ 8 ಗಂಟೆಯವರೆಗೂ ಹುಡುಕಾಟ ಆರಂಭಿಸಿದರೂ ಸಹ, ದಟ್ಟವಾದ ಮಂಜು ಮತ್ತು ಕತ್ತಲೆಯಿಂದಾಗಿ ಯಾವುದೇ ಸುಳಿವು ಸಿಗಲಿಲ್ಲ. ಈ ಪ್ರದೇಶವು ಕಡಿದಾದ ಇಳಿಜಾರು ಮತ್ತು ದಟ್ಟವಾದ ಹುಲ್ಲುಗಾವಲುಗಳಿಂದ ಕೂಡಿದ್ದು, ಹುಡುಕಾಟಕ್ಕೆ ಭಾರಿ ಅಡಚಣೆಯಾಗಿದೆ. ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಥರ್ಮಲ್ ಡ್ರೋನ್ ಬಳಸಿ ಬೆಳಗಿನ ಜಾವ 4-30ರ ತನಕ ಶೋಧ ನಡೆಸಿದ್ದಾರೆ. ಆದರೂ ಬಾಲಕಿ ಪತ್ತೆಯಾಗಿಲ್ಲ. ಬೆಳಗ್ಗೆ ವಿಪತ್ತು ನಿರ್ವಹಣಾ ತಂಡದವರು ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.