ಮಂಗಳೂರು: ದ್ವಿತೀಯ ಪರೀಕ್ಷೆ ನಡೆಯುತ್ತಿರುವಾಗಲೇ ಅಮ್ಮನನ್ನು ಕಳೆದುಕೊಂಡರೂ ಧೃತಿಗೆಡದೆ ಸಾಧನೆಯನ್ನೇ ಗುರಿಯಾಗಿಸಿಕೊಂಡು ಅಭ್ಯಾಸ ಮಾಡಿದ್ದ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೂರು ಪರೀಕ್ಷೆಗಳು ಮುಗಿದಿದ್ದವು. ಇನ್ನೂ ಮೂರು ಬಾಕಿಯಿದ್ದವು. ಈ ನಡುವೆಯೇ ತಾಯಿಯನ್ನು ಕಳೆದುಕೊಂಡು ಮನಸ್ಸಿನಲ್ಲಿ ದುಃಖ, ಕಣ್ಣಲ್ಲಿ ನೀರು ತುಂಬಿಕೊಂಡು ಧೃತಿಗೆಡದೇ ಪರೀಕ್ಷೆ ಬರೆದು ಈಗ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಮೂರು ಪರೀಕ್ಷೆ ಬರೆದ ನಂತರ ತಾಯಿಯನ್ನು ಕಳೆದುಕೊಂಡೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ಯಾವ ಕಡೆ ಗಮನ ಕೊಡಬೇಕೆಂದು ಮೊದಲಿಗೆ ತೋಚಲಿಲ್ಲ. ಅದಾದ ನಂತರ ಒಂದನ್ನು ಕಳೆದುಕೊಂಡೆ. ಇನ್ನೊಂದನ್ನು ಕಳೆದುಕೊಳ್ಳುವುದು ಬೇಡವೆಂದು ಪರೀಕ್ಷೆಯೆಡೆಗೆ ಹೆಚ್ಚು ಗಮನ ಹರಿಸಿದೆ. ಆದರೆ ನನ್ನ ಲೆಕ್ಚರ್ಗಳು ತುಂಬಾ ಬೆನ್ನೆಲುಬಾಗಿ ನಿಂತರು. ಅಮ್ಮ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಕಳೆದುಕೊಂಡೆ.
ನನ್ನ ತಾಯಿ ಈಗ ಇದ್ದಿದ್ರೆ ತುಂಬಾ ಖುಷಿ ಪಡುತ್ತಿದ್ರು. ಹೇಗೆ ಹೇಳಬೇಕೆಂದು ಅರ್ಥ ಆಗುತ್ತಿಲ್ಲ. ನಾನು ಇಲ್ಲದ ಅಮ್ಮನಿಗೋಸ್ಕರವಾದ್ರೂ ಪರೀಕ್ಷೆ ಬರೆದು ಸಾಧನೆ ಮಾಡಬೇಕು ಎಂದು ದೃಢ ನಿಶ್ಚಯ ಮಾಡಿದೆ. ಅದಕ್ಕೆ ತುಂಬಾ ಕಷ್ಟಪಟ್ಟು ಏನಾದ್ರೂ ಆಗಲಿ. ಬೇಕು ಅಂತ ಡಿಸೈಡ್ ಮಾಡಿದೆ. ನಾನು ಚೆನ್ನಾಗಿ ಓದಬೇಕು ಎಂಬುದೇ ಅಮ್ಮನ ಆಸೆಯಾಗಿತ್ತು. ಅಮ್ಮನನ್ನು ಮನದಲ್ಲಿ ತುಂಬಿಕೊಂಡು ಅಭ್ಯಾಸದಲ್ಲಿ ಲಕ್ಷ್ಯವನ್ನು ಕೇಂದ್ರೀಕರಿಸಿದೆ. ಪರಿಶ್ರಮಕ್ಕೆ ಫಲಿತಾಂಶ ದೊರೆತಿದೆ ಎಂದಿದ್ದಾರೆ.