ಗದಗ: ಪಶ್ಚಿಮ ಏಷ್ಯಾದ ಸಂಘರ್ಷದ ಸಂಕಷ್ಟದ ಪರಿಣಾಮವಾಗಿ ರಫ್ತು ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ, ಗದಗ ಮತ್ತು ಸುತ್ತಮುತ್ತಲಿನ ರೈತರು ಬೆಳೆದಿದ್ದ ಕಲ್ಲಂಗಡಿ ಹಣ್ಣುಗಳನ್ನು ತಮ್ಮ ಹೊಲ ಗದ್ದೆಗಳಲ್ಲೇ ಕೊಳೆಯಲು ಬಿಡಬೇಕಾದ ಪರಿಸ್ಥಿತಿ ಬಂದಿದೆ.
ಹಲವಾರು ವರ್ಷಗಳಿಂದ ಮಹಾರಾಷ್ಟ್ರ ಹಾಗೂ ಇತರ ಪಕ್ಕದ ರಾಜ್ಯಗಳಿಂದ ಬಂದ ಬೃಹತ್ ಪ್ರಮಾಣದ ಖರೀದಿದಾರರು ಗದಗ ಜಿಲ್ಲೆಯಿಂದ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಿ ರಫ್ತು ಮಾಡುತ್ತಿದ್ದರು. ಆದರೆ ಈ ಬಾರಿ ಅನೇಕ ಖರೀದಿದಾರರು ಬಂದೇ ಇಲ್ಲ. ಬಂದ ಕೆಲವರು ಮಾತ್ರ ಪ್ರತಿ ಕಿಲೋಗೆ 17 ರಿಂದ 18 ರೂಪಾಯಿ ನೀಡುತ್ತಿದ್ದ ಜಾಗದಲ್ಲಿ ಈಗ ಕೆಜಿಗೆ 2ರಿಂದ 3 ರೂಪಾಯಿ ಮಾತ್ರ ನೀಡಲು ಮುಂದಾಗಿದ್ದಾರೆ.
ಶ್ರೀನಿವಾಸ್, ಪ್ರಕಾಶ್ ಮತ್ತು ಸಣ್ಣಗೌಡ ಪಾಟೀಲ್ ಸೇರಿದಂತೆ ಹಲವರು ನಷ್ಟದಿಂದಾಗಿ ಕಲ್ಲಂಗಡಿ ಬೆಳೆಯುವುದನ್ನು ಬಿಟ್ಟುಬಿಟ್ಟಿದ್ದಾರೆ. ಕಡಿಮೆ ಬೆಲೆಗಳಿಂದ ತಮ್ಮ ಹೂಡಿಕೆಯನ್ನು ಕೂಡ ವಾಪಸು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಲೆ ಕುಸಿತದ ಸುದ್ದಿ ಹರಡುತ್ತಿದ್ದಂತೆ ಜಿಲ್ಲೆಯ ಇನ್ನಷ್ಟು ರೈತರು ತಮ್ಮ ಬೆಳೆಯುವುದನ್ನು ಬಿಟ್ಟುಬಿಟ್ಟಿದ್ದಾರೆ. ಈಗ ಅವರು ತಮ್ಮ ನಷ್ಟವನ್ನು ಪರಿಹರಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸಹಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.
ಬಿಂಕದಕಟ್ಟಿ ಗ್ರಾಮದ ರೈತ ಶ್ರೀನಿವಾಸ್ ಪಾಟೀಲ್, “ನಾನು ಮೊದಲ ಬಾರಿಗೆ ನನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ನಮ್ಮ ಜಿಲ್ಲೆಯ ಸುತ್ತಲಿನ ಹಲವಾರು ಹೊಲಗಳಿಗೆ ಭೇಟಿ ಮಾಡಿ ತಜ್ಞರ ಸಲಹೆ ಪಡೆದಿದ್ದೆ.
ಕಲ್ಲಂಗಡಿ ಬೆಳೆದರೆ ಉತ್ತಮ ಆದಾಯ ಸಿಗುತ್ತದೆ ಎಂದು ಅವರು ಭರವಸೆ ನೀಡಿದ್ದರು. ಅವರ ಮಾರ್ಗದರ್ಶನದ ಮೇರೆಗೆ ಮುಂಬೈಯ ರಫ್ತುಗಾರರನ್ನು ಸಂಪರ್ಕಿಸಿದ್ದೆ, ಅವರು ಉತ್ತಮ ಬೆಲೆ ನೀಡುವುದಾಗಿ ಮಾತುಕತೆ ನಡೆಸಿದ್ದರು. ಆದರೆ ನನ್ನ ಹೊಲಕ್ಕೆ ಬಂದ ದೊಡ್ಡ ಪ್ರಮಾಣದ ಖರೀದಿದಾರರು ಯುದ್ಧ ಪರಿಸ್ಥಿತಿಯಿಂದ ಹಣ್ಣುಗಳನ್ನು ರಫ್ತು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಹೀಗಾಗಿ ನನ್ನ ವೆಚ್ಚವನ್ನು ವಾಪಸು ಪಡೆಯಲು ಯಾವುದೇ ಮಾರ್ಗವಿಲ್ಲದೆ ಬೆಳೆಗಳನ್ನು ಹೊಲದಲ್ಲೇ ಬಿಟ್ಟೆ ಎನ್ನುತ್ತಾರೆ.