ಮಡಿಕೇರಿ: ಕೊಡಗು ಜಿಲ್ಲೆಯ ಮಾಲ್ದಾರೆ ಪ್ರದೇಶದಲ್ಲಿ ಕಾಡಿನಿಂದ ಹೊರಬಂದು ಖಾಸಗಿ ಕಾಫಿ ತೋಟಗಳಿಗೆ ನುಗ್ಗಿದ್ದ 11ಕ್ಕೂ ಹೆಚ್ಚು ಕಾಡಾನೆಗಳಿದ್ದ ಹಿಂಡನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಯಶಸ್ವಿಯಾಗಿ ಮತ್ತೆ ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ.
ನೆಲ್ಲಿಹುದಿಕೇರಿ ಮತ್ತು ಅರೆಕಾಡು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಆನೆಗಳ ಸಂಚಾರ ಹೆಚ್ಚಾಗಿ. ಬೆಳೆ ನಷ್ಟವಾಗುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು.
ಈ ಹಿನ್ನೆಲೆ ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ಆರಂಭಿಸಿತು. ಕುಶಾಲನಗರ ವಿಭಾಗದ ಅರಣ್ಯ ಸಿಬ್ಬಂದಿ ಸೇರಿ 30ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಲಯ ಅರಣ್ಯ ಅಧಿಕಾರಿ (ಆರ್ಎಫ್ಒ) ಸಚಿನ್ ನೇತೃತ್ವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಗೋಪಾಲ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಬೆಳಗ್ಗೆಯೇ ಆರಂಭವಾದ ಕಾರ್ಯಾಚರಣೆಯಲ್ಲಿ ಆನೆಗಳು ಕಾಫಿ ತೋಟಗಳ ಮಧ್ಯೆ ಸಂಚರಿಸುತ್ತಿದ್ದರಿಂದ ಅವುಗಳನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿತ್ತು. ವಿಶೇಷವಾಗಿ ಮರಿ ಆನೆ ಗುಂಪಿನಲ್ಲಿ ಇದ್ದುದರಿಂದ ಕಾರ್ಯಾಚರಣೆ ಇನ್ನಷ್ಟು ಕಠಿಣವಾಗಿತ್ತು.
ಆನೆಗಳು ಗಾಬರಿಯಿಂದ ಓಡುವ ಸಂದರ್ಭಗಳಲ್ಲಿ ಸಿಬ್ಬಂದಿ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಯಿತು. ಕೊನೆಗೆ ಪಟಾಕಿಗಳನ್ನು ಬಳಸಿಕೊಂಡು ಆನೆಗಳನ್ನು ಕಾಡಿನತ್ತ ಓಡುವಂತೆ ಮಾಡಲಾಯಿತು. ಆದಾಗ್ಯೂ, ಅರಣ್ಯ ಇಲಾಖೆಯ ‘ಚೇಸಿಂಗ್ ಆಪರೇಷನ್’ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನೆಗಳನ್ನು ಓಡಿಸುವಾಗ ಅವು ಗಾಬರಿಯಿಂದ ತೋಟಗಳತ್ತ ಓಡಿ ಬಂದರೆ, ಬೆಳೆಗಳಿಗೆ ಮತ್ತಷ್ಟು ಹಾನಿ ಉಂಟುಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಕ್ರಮಗಳು ಕೆಲವೊಮ್ಮೆ ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ಹೆಚ್ಚು ಹಾನಿ ಉಂಟುಮಾಡುತ್ತವೆ ಎಂದು ಸ್ಥಳೀಯ ಬೆಳೆಗಾರ ಎಂ. ಸಲೀಂ ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿರ್ವಹಿಸಲು ಅರಣ್ಯ ಇಲಾಖೆಯು ಹೆಚ್ಚು ವೈಜ್ಞಾನಿಕ ಮತ್ತು ಸುಸ್ಥಿರ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.