ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ನಡುವೆ, ಬ್ಲಾಕ್ ಮಾರುಕಟ್ಟೆಯಲ್ಲಿ ಟಿಕೆಟ್ ಮಾರಾಟವನ್ನು ತಡೆಯಲು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಮಫ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಲ್ಲಿಯವರೆಗೆ, ನಗರದಲ್ಲಿ ಮೂರು ಐಪಿಎಲ್ ಪಂದ್ಯ ನಡೆದಿದ್ದು, ಪೊಲೀಸರು 10 ಪ್ರಕರಣಗಳನ್ನು ದಾಖಲಿಸಿದ್ದು, 10 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೋಟೆಲ್ ಸಿಬ್ಬಂದಿಯೊಬ್ಬರು ಬುಧವಾರ ಆರ್ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಅಕ್ರಮವಾಗಿ ಟಿಕೆಟ್ಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಅವರನ್ನು ಬಂಧಿಸಿದೆ.
ಪೊಲೀಸರು ಅವರ ಬಳಿಯಿಂದ 100 ಕ್ಕೂ ಹೆಚ್ಚು ಐಪಿಎಲ್ ಟಿಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಸಂಪಂಗಿರಾಮನಗರ ನಿವಾಸಿ ಚಂದ್ರಶೇಖರ್ ಪಿ (49) ಎಂದು ಗುರುತಿಸಲಾಗಿದೆ, ಆತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀ ಲಕ್ಷ್ಮಿ ಕ್ಯಾಟರರ್ಸ್ನೊಂದಿಗೆ ಕೆಲಸ ಮಾಡುತ್ತಿದ್ದ.
ಸಿಸಿಬಿ ಡಿಸಿಪಿ ಹರಿಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಕ್ಷ್ಮೀ ಕ್ಯಾಟರ್ಸ್ ಹೋಟೆಲ್ನ ಕ್ಯಾಪ್ಟನ್ ಚಂದ್ರಶೇಖರ್ ಎಂಬಾತ ಸಿಕ್ಕಿಬಿದ್ದಿದ್ದಾನೆ. 15 ಸಾವಿರ ರೂಪಾಯಿ ಬೆಲೆಯ ಟಿಕೆಟ್ಗಳನ್ನು ಈತ ಬರೋಬ್ಬರಿ 19 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಆಘಾತಕಾರಿಯಾಗಿದ್ದು, ಕೆಎಸ್ಸಿಎ ಸದಸ್ಯ ಗಣೇಶ್ ಹರಿಕೇಶ್ ಎಂಬುವವರ ಹೆಸರನ್ನು ಬಾಯ್ಬಿಟ್ಟಿದ್ದಾನೆ.
ಉಪ ಪೊಲೀಸ್ ಆಯುಕ್ತ ಶ್ರೀಹರಿ ಬಾಬು ಬಿ ಎಲ್ ನೇತೃತ್ವದಲ್ಲಿ ವಿಶೇಷ ವಿಚಾರಣಾ ವಿಭಾಗದ ಅಧಿಕಾರಿಗಳು ಅಕ್ರಮ ಟಿಕೆಟ್ ಮಾರಾಟ ಜಾಲದ ಮೇಲೆ ನಿಗಾ ಇರಿಸಿ ವಂಚನೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಶ್ರೀಹರಿ ಬಾಬು, ಐಪಿಎಲ್ ಪಂದ್ಯಗಳ ಸಮಯದಲ್ಲಿ ಮಫ್ತಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.
ಕ್ರೀಡಾಂಗಣದ ಬಳಿ ಅನುಮಾನಾಸ್ಪದವಾಗಿ ವರ್ತಿಸುವ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದರು. ಸುಳಿವು ಪಡೆದ ಅಧಿಕಾರಿಗಳು ಶಂಕಿತನನ್ನು ಸಂಪರ್ಕಿಸಿ, ಅಕ್ರಮ ಟಿಕೆಟ್ ಮಾರಾಟವನ್ನು ದೃಢಪಡಿಸಿದ ನಂತರ, ಆತನನ್ನು ವಶಕ್ಕೆ ತೆಗೆದುಕೊಂಡು ಆತನ ಬಳಿ ಇರುವ ಟಿಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಇದುವರೆಗೆ 10 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಟಿಕೆಟ್ಗಳ ಮೂಲವನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.
ಮಾರ್ಚ್ 28 ರಂದು ನಡೆದ ಆರ್ಸಿಬಿ vs ಸನ್ರೈಸರ್ಸ್ ಹೈದರಾಬಾದ್ ಪಂದ್ಯಕ್ಕಾಗಿ ಅವರು ಈ ಹಿಂದೆ 81 ಟಿಕೆಟ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ. ಗಣೇಶ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಮತ್ತು ಅವರು ನಿಜವಾಗಿಯೂ ಕೆಎಸ್ಸಿಎ ಸದಸ್ಯನೆ ಎಂದು ಪರಿಶೀಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.