ಜನಸಾಮಾನ್ಯರು ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರವಾಗಿ ಬೇಸತ್ತಿರುವ ವಿಷಯ ಹೊಸದೇನು ಅಲ್ಲ. ಈಗ ರಸ್ತೆ ಗುಂಡಿಯನ್ನು ಓರ್ವ ಉದ್ಯಮಿ ತನ್ನ ಐಷಾರಾಮಿ ಪೋರ್ಷೆ ಕಾರನ್ನು ಬಳಸಿ ದುರಸ್ತಿ ಮಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಉದ್ಯಮಿ ಅಖಿಲ್ ಹೇಮಾದ್ರಿ ಎಂಬುವವರು ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮತ್ತು ಜಲ್ಲಿ ಮಿಶ್ರಣ ಮಾಡಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಪೋರ್ಷೆ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿ, ಸಿಮೆಂಟ್ ಮತ್ತು ಇತರ ಸಾಮಗ್ರಿಗಳನ್ನು ತಮ್ಮ ಕಾರಿನ ಮುಂಭಾಗದ ಬಾನೆಟ್ ಮೇಲೆಯೇ ಹಾಕಿ ಮಿಶ್ರಣ ಮಾಡಿ, ನಂತರ ಅದನ್ನು ಗುಂಡಿಗೆ ಸುರಿದು ರಸ್ತೆಯನ್ನು ದುರಸ್ತಿ ಮಾಡಿದ್ದಾರೆ.
"ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ, ಸಾರ್ವಜನಿಕ ಸ್ಥಳಗಳ ನಿರ್ವಹಣೆಯಲ್ಲಿ ನಾಗರಿಕರೂ ಕೈಜೋಡಿಸಬೇಕು. ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂದು ಕಾಯಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಅಖಿಲ್ ಸಾರ್ವಜನಿಕರಿಗೆ ಸಂದೇಶ ರವಾನಿಸಿದ್ದಾರೆ.
ಉದ್ಯಮಿಯ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಸ್ತೆ ಸಮಸ್ಯೆಯತ್ತ ಆಡಳಿತ ನಡೆಸುತ್ತಿರುವವರ ಗಮನ ಸೆಳೆಯಲು ಮತ್ತು ನಾಗರಿಕ ಜವಾಬ್ದಾರಿಯನ್ನು ನೆನಪಿಸಲು ಇದು ಉತ್ತಮ ಮಾರ್ಗ ಎಂದು ನೆಟ್ಟಿಗರು ಹೇಳಿದ್ದಾರೆ. ಇನ್ನು ಉದ್ಯಮಿ ವಿಡಿಯೋದ ಕೊನೆಯಲ್ಲಿ ತನ್ನ ಕಂಪನಿಯ ಬ್ರ್ಯಾಂಡ್ ಪ್ರಚಾರ ಮಾಡಿಕೊಂಡಿರುವುದನ್ನು ಗಮನಿಸಿರುವ ಕೆಲವರು ಇದನ್ನು ಕೇವಲ ಪ್ರಚಾರಕ್ಕಾಗಿ ಮಾಡಿದ ಕೆಲಸ ಎಂದು ಟೀಕಿಸಿದ್ದಾರೆ.
ಅಲ್ಲದೆ, ಪೋರ್ಷೆ ಕಾರಿನ ಬಾನೆಟ್ ಮೇಲೆ ರಕ್ಷಣಾತ್ಮಕ ಪದರವೊಂದನ್ನು ಹಾಕಿ ನಂತರ ಸಿಮೆಂಟ್ ಕಲಸಿರುವುದು, ಇದು ವ್ಯವಸ್ಥಿತವಾಗಿ ಚಿತ್ರೀಕರಿಸಿದ ವಿಡಿಯೋ ಎಂಬ ಟೀಕೆಗೆ ಗುರಿಯಾಗಿದೆ. ಇದು ಪ್ರೊಟೆಕ್ಟಿವ್ ಲೇಯರ್ ಜಾಹೀರಾತಿಗಾಗಿ ವಿಡಿಯೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಸಿಲಿಕಾನ್ ಸಿಟಿಯ ಗುಂಡಿ ಬಿದ್ದ ರಸ್ತೆಗಳು ಮತ್ತು ಹದಗೆಡುತ್ತಿರುವ ಮೂಲಸೌಕರ್ಯಗಳ ಕುರಿತು ಖ್ಯಾತ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ಸಿಎಫ್ಒ ಮೋಹನ್ದಾಸ್ ಪೈ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ನಗರದ ಅವ್ಯವಸ್ಥೆಯ ಫೋಟೋ ಹಂಚಿಕೊಂಡಿರುವ ಅವರು, ಜಿಬಿಎ ರಸ್ತೆ ದುರಸ್ತಿ ಕಾರ್ಯವು “ಅತ್ಯಂತ ಪ್ರಾಚೀನ ಮತ್ತು ಶೋಚನೀಯ” ಎಂದು ಕಿಡಿಕಾರಿದ್ದಾರೆ.
ಬ್ಲ್ಯಾಕ್ಬಕ್ ಸಿಇಒ ಬೆಂಗಳೂರನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಪೈ ಅವರು ವಾಗ್ದಾಳಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವದ ಶ್ರೇಷ್ಠ ಕಂಪನಿಗಳಿರುವ, ಸುಮಾರು ಎಂಟು ಲಕ್ಷ ಜನರು ಕೆಲಸ ಮಾಡುವ ಪ್ರಮುಖ ರಸ್ತೆಗಳನ್ನೇ ದುರಸ್ತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.