ಬೆಂಗಳೂರು: ಗೃಹಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಬೆಟ್ಟಿಂಗ್ ಸಂಕಷ್ಟ ಎದುರಾಗಿದ್ದು ಅವರ ವಿರುದ್ಧ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. 42ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶ ಕೆಎಂ ಶಿವಕುಮಾರ್ ಅವರು, ತುಮಕೂರಿನ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ FIR ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
2025ರಲ್ಲಿ ತುಮಕೂರಿನಲ್ಲಿ ನಡೆದ ಪಿಯು ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯದ ವೇಳೆ ನಾನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದೆ ಎಂದು ಪರಮೇಶ್ವರ್ ಹೇಳಿದ್ದರು. ಬೆಟ್ಟಿಂಗ್ ಕಟ್ಟುವುದು ಅಪರಾಧ ಎಂದು ಎಚ್.ಆರ್ ನಾಗಭೂಷಣ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಸಚಿವರೇ ಸ್ವತಃ ಈ ವಿಷಯವನ್ನು ಹೇಳಿಕೊಂಡಿದ್ದರು. ತಮಾಷೆಗಾಗಿ ಬೆಟ್ಟಿಂಗ್ ಕಟ್ಟಿದೆ ಎಂದು ಸಚಿವರು ಹೇಳಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.