ಬೆಂಗಳೂರು: ಕುಮಾರಸ್ವಾಮಿ ತಮ್ಮ ಅನುಭವದ ಲೆಕ್ಕಾಚಾರದ ಮೇಲೆ ಮಾತನಾಡಿರಬೇಕು. ಅವರಲ್ಲಿ ಏನೋ ಸಮಸ್ಯೆ ಇರಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದರು. ರಾಜಕೀಯ ಲಾಭದ ಲೆಕ್ಕಾಚಾರ ಬದಿಗಿರಿಸಿ ತಮ್ಮ ಗೌರವ ಘನತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಲಿ ಎಂದು ಹೇಳಿದರು.
ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಸುಧಾಕರ್ ಅವರ ಕುರಿತು ಎಚ್.ಡಿ ಕುಮಾರಸ್ವಾಮಿ ಅವರು ಸತ್ಯ ಮುಚ್ಚಿಡುತ್ತಿದ್ದಾರೆ, ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದಾರೆ ಎಂದು ಮಾಡಿರುವ ಆರೋಪಕ್ಕೆ ಡಿಸಿಎಂ ಕಿಡಿಕಾರಿದರು.
ಡಿ.ಸುಧಾಕರ್ ಅವರ ಆರೋಗ್ಯದ ಬಗ್ಗೆ ಅವರ ಕುಟುಂಬದವರನ್ನು ಕೇಳಬೇಕು. ಅವರ ಬಗ್ಗೆ ಏನಾದರೂ ಗೊತ್ತಿದ್ದರೆ ಕುಮಾರಸ್ವಾಮಿ ಅವರೆ ಹೇಳಬೇಕು. ಏನೋ ಸಮಸ್ಯೆ ಇರಬಹುದು, ಅವರಿಗೆ ತಮ್ಮ ಅನುಭವದಿಂದ ಇಂಥ ಮಾತು ಬಂದಿರಬೇಕು. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ ಹೊರತು ಅವರ ಘನತೆ, ಅನುಭವಕ್ಕೆ ತಕ್ಕಂತೆ ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ಸರ್ಕಾರ ಏನಾದರೂ ಸಚಿವ ಡಿ.ಸುಧಾಕರ್ ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತದೆಯೇ? ಒಂದು ವೇಳೆ ಮಾಡಿದರೆ, ಕುಟುಂಬದವರು ಮಾಡಬೇಕು. ಹಾಗೆ ಮಾಡಲು ಆಗುತ್ತದೆಯೇ? ಒಂದಿಷ್ಟು ಮಾನವೀಯತೆ ಪ್ರದರ್ಶಿಸಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತೀಕ್ಷ್ಣವಾಗಿ ಹೇಳಿದರು.
ಸಚಿವ ಡಿ. ಸುಧಾಕರ್ ಅನಾರೋಗ್ಯ ವಿಚಾರವಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ಇಂತಹ ವಿಚಾರದಲ್ಲಿ ಮಾನವೀಯತೆ ತೋರಬೇಕಲ್ಲವೇ? ಯಾರು ಆ ರೀತಿ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಹೋಗುತ್ತಾರೆ? ಮಾಡಿದರೆ ಅವರ ಕುಟುಂಬ ಮಾಡಬೇಕು.
ಬೇರೆಯವರಾರೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಸಚಿವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆದಿದೆ. ಇನ್ನೂ ಪ್ರಜ್ಞೆ ಬಂದಿಲ್ಲ. ಕಾದುನೋಡೋಣ ಎಂದರು.