ಬೆಂಗಳೂರು: ಬೆಂಗಳೂರಿನಲ್ಲಿ ಉತ್ತರಾಖಂಡ ರಾಜ್ಯಪಾಲರ ಬೆಂಗಾವಲು ಪಡೆಯ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 30 ವರ್ಷದ ಬೈಕ್ ಸವಾರನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡ ರಾಜ್ಯಪಾಲರು ಸೋಮವಾರ ಸಂಜೆ 7.30 ರಿಂದ 8 ಗಂಟೆಯ ನಡುವೆ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂದೀಪ್ ವಿಹಾರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹದೇವಪುರಕ್ಕೆ ತೆರಳುತ್ತಿದ್ದರು.
ಕಾಟಮ್ನಲ್ಲೂರಿನ ಅಲಿಶಾನ್ ಎಂದು ಗುರುತಿಸಲಾದ ಸ್ಕೂಟರ್ ಸವಾರ, ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಅವರನ್ನು ನಿಂದಿಸಿದ ಮತ್ತು ತಳ್ಳಿದ ಹಾಗೂ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಂಚಾರ ಸಬ್-ಇನ್ಸ್ಪೆಕ್ಟರ್ ಬಿ ಕುಮಾರ್ ಸಿಂಗ್ ಅವರು ಅಲಿಶಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ವಿವಿಐಪಿ ಬೆಂಗಾವಲು ಪಡೆಯ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಿಂಗ್ ಮತ್ತು ಅವರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
"ಪೊಲೀಸರು ಕಾಟಮ್ನಲ್ಲೂರು ಸರ್ವಿಸ್ ರಸ್ತೆಯಲ್ಲಿರುವ ಕೀರ್ತಿ ಪೆಟ್ರೋಲ್ ಬಂಕ್ ಬಳಿ ಬೆಂಗಾವಲು ವಾಹನಗಳು ಮತ್ತು ಪಾದಚಾರಿಗಳನ್ನು ತಡೆದು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬೆಂಗಾವಲು ವಾಹನ ಸುಮಾರು 20 ಅಡಿ ದೂರದಲ್ಲಿದ್ದಾಗ, KA-53-HD-1879 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ಸ್ಕೂಟರ್ ಅನ್ನು ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರು ನಿಲ್ಲಿಸುವಂತೆ ಹೇಳಿದರೂ ನಿಲ್ಲಿಸಲಿಲ್ಲ. ಅಲಿಶಾನ್ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ದುಡುಕಿನ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ಸವಾರಿ ಮಾಡಿದನು" ಎಂದು ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಸಿಂಗ್ ವಾಹನವನ್ನು ತಡೆದು, ಇತರ ವಾಹನ ಚಾಲಕರಂತೆ ಬೆಂಗಾವಲು ಪಡೆಯ ವಾಹನಗಳು ಸಂಚರಿಸಲು ಸಹಕರಿಸುವಂತೆ ಅಲಿಶಾನ್ ಸೂಚಿಸಲಾಯಿತು. ಆದರೆ ಸಿಂಗ್ ಅವರನ್ನು ನಿಂದಿಸುತ್ತಾ, "ನಾವು ಗುಲಾಮರೇ? ನಾವು ಸ್ವತಂತ್ರ ನಾಗರಿಕರು. ನಮಗೆ ರಸ್ತೆ ಬಳಸುವ ಹಕ್ಕಿದೆ ಎಂದು ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ಹಲ್ಲೆ ನಡೆಸಿದ" ಎಂದು ಆರೋಪಿಸಲಾಗಿದೆ.