ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಗ್ರೇಟರ್ ಬೆಂಗಳೂರು ಅಥಾರಿಟಿ (GBA), ಹಿಂದಿನ ಸಿಐಟಿಬಿ (CITB) ಅಥವಾ ಹೌಸಿಂಗ್ ಸೊಸೈಟಿಗಳಿಂದ ನಿವೇಶನ ಪಡೆದವರು 5 ವರ್ಷಗಳೊಳಗೆ ಮನೆ ನಿರ್ಮಿಸಬೇಕು. ಇಲ್ಲವಾದರೆ ದುಪ್ಪಟ್ಟು ತೆರಿಗೆ ವಿಧಿಸುವುದು ಅಥವಾ ನಿವೇಶನವನ್ನು ಹಿಂಪಡೆಯುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನ ಹೆಬ್ಬಾಳ ಜಂಕ್ಷನ್ನ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಇಂದು "ತ್ಯಾಜ್ಯದಿಂದ ಸ್ವಾತಂತ್ರ್ಯ" (Freedom from Waste) / "ಜಸ್ಟ್ ಕ್ಲೀನ್ ಬೆಂಗಳೂರು" ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖಾಲಿ ನಿವೇಶನಗಳು ಕಸದ ತಾಣಗಳಾಗಿ ಬದಲಾಗುತ್ತಿದೆ. ಅದಕ್ಕಾಗಿ ಸರ್ಕಾರ ಅನಿವಾರ್ಯ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಬಿಡಿಎ, ಬಿಬಿಎಂಪಿ ಸೈಟ್ ಇರಲಿ, ಮನೆ ಕಟ್ಟದೇ ಖಾಲಿ ಬಿಟ್ಟರೆ ಡಬಲ್ ಟ್ಯಾಕ್ಸ್ ಕಟ್ಟಬೇಕಾಗುತ್ತೆ. ಅಥವಾ ಮನೆ ಕಟ್ಟದೇ ಇದ್ರೆ ಖಾಲಿ ಸೈಟನ್ನ ವಾಪಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ
ಸರ್ಕಾರ ನಿವೇಶನ ನೀಡುವುದು ಮನೆ ಕಟ್ಟಿಕೊಳ್ಳಲು. ಆದರೆ ಕೆಲವರು 20, 30, 40 ವರ್ಷಗಳಾದರೂ ಮನೆ ಕಟ್ಟಿಲ್ಲ. ಅಗತ್ಯವಿದ್ದರೆ ಅವರು ಪಾವತಿಸಿದ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಿ ನಿವೇಶನವನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಅಲ್ಲದೆ, ಖಾಲಿ ನಿವೇಶನಗಳಿಗೆ ಕಾಂಪೌಂಡ್ ಕೂಡ ಹಾಕದೆ ಕಸ ಹಾಕಲು ಅವಕಾಶ ನೀಡುವುದು ಸರಿಯಲ್ಲ. ಜಾಗದ ಮಾಲೀಕರು ತಮ್ಮ ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿಯೂ ಹೊಂದಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಆಗಸ್ಟ್ 15ರೊಳಗೆ ಖಾಲಿ ನಿವೇಶನ ಸ್ವಚ್ಛಗೊಳಿಸಿ
ಸ್ವಚ್ಛತಾ ಅಭಿಯಾನದ ಭಾಗವಾಗಿ ಬೆಂಗಳೂರು ನಗರದ ಖಾಲಿ ನಿವೇಶನಗಳ ಮಾಲೀಕರಿಗೆ ಆಗಸ್ಟ್ 15ರವರೆಗೆ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಕಸ, ಕಟ್ಟಡ ನಿರ್ಮಾಣದ ತ್ಯಾಜ್ಯ, ಕಳೆ, ಮಣ್ಣಿನ ರಾಶಿ, ಪೊದೆಗಳು ಇವುಗಳನ್ನು ತೆರವುಗೊಳಿಸಬೇಕು. ಗಡುವಿನ ನಂತರ ಸಂಬಂಧಿತ ನಗರ ಪಾಲಿಕೆ ಅಥವಾ GBA ಅಧಿಕಾರಿಗಳು ಸ್ವತಃ ಸ್ವಚ್ಛಗೊಳಿಸಿ, ಅದರ ವೆಚ್ಚವನ್ನು ಆಸ್ತಿ ತೆರಿಗೆಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ.
ಖಾಲಿ ನಿವೇಶನಗಳಲ್ಲಿ ಕಸ ತೆರವು ಮಾಡದವರಿಗೆ ಮೊದಲ ಉಲ್ಲಂಘನೆಗೆ 25 ಸಾವಿರ ರೂ ದಂಡ ಮತ್ತು ಮರು ಉಲ್ಲಂಘನೆಗೆ 50,000 ರಿಂದ 1 ಲಕ್ಷದವರೆಗೆ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಕಸ ಸುರಿಯುವ ವಾಹನಗಳನ್ನು ಪೊಲೀಸರು ತಕ್ಷಣ ವಶಪಡಿಸಿಕೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಕಸ ಸುರಿಯುವವರ ಫೋಟೋ ಮತ್ತು GPS ಸ್ಥಳವನ್ನು ವಾಟ್ಸಾಪ್: +91 94481 97197ಗೆ ಕಳುಹಿಸಿ ದೂರು ನೀಡಬಹುದು.