ಬಿ. ನಾಗೇಂದ್ರ ಜೊತೆಗೆ ಸಿಎಂ ಡಿಕೆ ಶಿವಕುಮಾರ್ 
ರಾಜ್ಯ

'ನನ್ನ ಮೇಲೂ ಪ್ರಕರಣಗಳಿವೆ, ಆದರೂ ಸಿಎಂ ಆದೆ': ವಿಪಕ್ಷದ ಟೀಕೆ ನಡುವೆ ಬಿ. ನಾಗೇಂದ್ರರ ಸಂಪುಟ ಸೇರ್ಪಡೆ ಸಮರ್ಥಿಸಿಕೊಂಡ ಶಿವಕುಮಾರ್!

2023ರ ಚುನಾವಣಾ ಅಫಿಡವಿಟ್ ಪ್ರಕಾರ, ನಾಗೇಂದ್ರ ಅವರ ವಿರುದ್ಧ ಇತರ 42 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ 89 ಕೋಟಿ ರೂ. ದುರುಪಯೋಗದ ಆರೋಪವಿದ್ದರೂ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದನ್ನು ವಿರೋಧ ಪಕ್ಷವಾದ ಬಿಜೆಪಿ ಪ್ರಶ್ನಿಸಿದೆ. ಇದರ ನಡುವೆಯೇ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೋಮವಾರ ನಾಗೇಂದ್ರರ ಸೇರ್ಪಡೆಯನ್ನು ಸಮರ್ಥಿಸಿಕೊಂಡರು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ (ST) ಅಭಿವೃದ್ಧಿ ನಿಗಮದಲ್ಲಿ ಸಾರ್ವಜನಿಕ ಹಣ ದುರುಪಯೋಗವಾದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. 2023ರ ಚುನಾವಣಾ ಅಫಿಡವಿಟ್ ಪ್ರಕಾರ, ನಾಗೇಂದ್ರ ಅವರ ವಿರುದ್ಧ ಇತರ 42 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.

"ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾದ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಆರೋಪಗಳ ನಡುವೆಯೂ (ನಾಗೇಂದ್ರ ಅವರನ್ನು) ಯಾಕೆ ಸಚಿವರನ್ನಾಗಿ ಮಾಡಲಾಗಿದೆ? ಇದು ಅವರ ಲೂಟಿಗೆ ನೀಡಿದ ಬಹುಮಾನವೇ ಅಥವಾ ಅವರು ಹೈಕಮಾಂಡ್‌ಗೆ ಹಣ ತಲುಪಿಸಿದ್ದಕ್ಕಾಗಿ ನೀಡಿದ ಪ್ರತಿಫಲವೇ?" ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಭ್ರಷ್ಟಾಚಾರದ ಪ್ರಕರಣಗಳನ್ನು ಎದುರಿಸುತ್ತಿದ್ದರೂ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದರು.

"ನನ್ನ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ನನ್ನ ಮೇಲೂ ಭ್ರಷ್ಟಾಚಾರದ ಆರೋಪಗಳು ಮತ್ತು ಪ್ರಕರಣಗಳು ದಾಖಲಾಗಿರಲಿಲ್ಲವೇ? ನನ್ನನ್ನು ಜೈಲಿಗೆ ಕಳುಹಿಸಿರಲಿಲ್ಲವೇ? ಆದರೂ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ," ಎಂದು ಶಿವಕುಮಾರ್ ಹೇಳಿದರು. ಅವರ 2023ರ ಚುನಾವಣಾ ಅಫಿಡವಿಟ್ ಪ್ರಕಾರ, ಶಿವಕುಮಾರ್ ವಿರುದ್ಧ 19 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.

ಇದೇ ವೇಳೆ, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರಿಗೆ "ಸಂಯಮದಿಂದ ಇರುವಂತೆ" ಶಿವಕುಮಾರ್ ಸಲಹೆ ನೀಡಿದರು ಮತ್ತು ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ" ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ VIDEO ವೈರಲ್!

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್