ಬೆಂಗಳೂರು: ದೇಶದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಸಿಟಿಯಾಗಿ ರೂಪಿಸಲು ಉದ್ದೇಶಿಸಿ, ಬೆಂಗಳೂರು ನಗರದ ಹೊರವಲಯದಲ್ಲಿ ಬಿಡದಿ ಟೌನ್ಶಿಪ್ (ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ - GBIT) ಯೋಜನೆಗಾಗಿ 516 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು, ಸರ್ಕಾರ ಸ್ವಾಧೀನ ಮಾಡಿಕೊಳ್ಳುವುದನ್ನು ಪ್ರಶ್ನಿಸಿ ಹೊಸೂರು ಗ್ರಾಮದ 14 ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:
ಸರ್ಕಾರಕ್ಕೆ 34,000 ಕೋಟಿ ಲಾಭ!
ಹೈಕೋರ್ಟ್ ಮೆಟ್ಟಿಲೇರಿದ್ದ 14 ರೈತರ ಪರವಾಗಿ ವಾದ ಮಾಡಿದ ವಕೀಲ ಎಂ.ಎಚ್. ಪ್ರಕಾಶ್, ಬಿಡದಿ ಟೌನ್ಶಿಪ್ ಮೂಲಕ ಸರ್ಕಾರವು ಸುಮಾರು 34,000 ಕೋಟಿ ರೂಪಾಯಿ ಲಾಭ ಗಳಿಸಲು ಮುಂದಾಗಿದೆ. ಆದರೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಆರೋಪಿಸಿದರು.
ಇದೆ ವೇಳೆ, ಯೋಜನೆ ಆರಂಭಿಸುವ ಮುನ್ನ 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ನ್ಯಾ. ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠವು ಸರ್ಕಾರವನ್ನು ಪ್ರಶ್ನಿಸಿತು. ಜೊತೆಗೆ ಸರ್ಕಾರವು ಈ ಯೋಜನೆಗೆ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 10(A) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಹೇಳಿರುವುದಕ್ಕೆ, "ಇದು ಸೆಕ್ಷನ್ 10(A) ಅಡಿ ವಿನಾಯಿತಿ ಪಡೆಯಲು ಗ್ರಾಮೀಣ ವಸತಿ ಯೋಜನೆಯೇ?" ಎಂದು ಖಾರವಾಗಿ ಪ್ರಶ್ನಿಸಿತು.
ಮುಂದುವರೆದು, ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಬಹುತೇಕ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಈಗಾಗಲೇ ತಮ್ಮ ಸಮ್ಮತಿ ಸೂಚಿಸಿದ್ದಾರೆ. ಜೊತೆಗೆ ಅರ್ಜಿದಾರರಾದ 14 ರೈತರಿಗೆ ಸೂಕ್ತ ಪರಿಹಾರದ ಮೊತ್ತ ನಿಗದಿಯಾಗುವವರೆಗೂ ಅವರ ಜಮೀನು ಅಥವಾ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಜಮೀನನ್ನು ವಶಕ್ಕೆ ಪಡೆಯದಂತೆ...
ಅರ್ಜಿದಾರರಾದ 14 ರೈತರಿಗೆ ಸೂಕ್ತ ಪರಿಹಾರ ನಿಗದಿಯಾಗುವವರೆಗೂ ಅರ್ಜಿದಾರ ರೈತರ ಜಮೀನನ್ನು ವಶಕ್ಕೆ ಪಡೆಯದಂತೆ ಪೀಠವು ತಿಳಿಸಿದೆ. ಜೊತೆಗೆ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ 3 ವಾರಗಳ ಕಾಲ ಮುಂದೂಡಿದೆ.