ಶಿವಮೊಗ್ಗ: ಕಳೆದ ಮೂರು-ನಾಲ್ಕು ದಿನಗಳಿಂದ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಶಿವಮೊಗ್ಗ ಜಿಲ್ಲೆಯ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ತುಂಗಾ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿರುವುದರಿಂದ ತಗ್ಗು ಪ್ರದೇಶದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಸೋಮವಾರ ಬೆಳಿಗ್ಗೆ ವೇಳೆಗೆ ಭದ್ರಾ ಜಲಾಶಯದ ನೀರಿನ ಮಟ್ಟ 163.6 ಅಡಿಗೆ ತಲುಪಿದ್ದು, ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದೆ. ಕಳೆದ ಶುಕ್ರವಾರ ಜಲಾಶಯದಲ್ಲಿ ಕೇವಲ 153 ಅಡಿ ನೀರಿದ್ದರೆ, ಕೇವಲ ಮೂರು ದಿನಗಳಲ್ಲಿ 7 ಅಡಿಗೂ ಹೆಚ್ಚು ನೀರಿನ ಮಟ್ಟ ಏರಿಕೆಯಾಗಿದೆ.
ಇದೇ ರೀತಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,784.70 ಅಡಿಗೆ ಏರಿಕೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಆಗಿದ್ದು, ಕಳೆದ ಶುಕ್ರವಾರ ಇದು 1,776 ಅಡಿ ಇತ್ತು. ಕಳೆದ 24 ಗಂಟೆಗಳಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 58.2 ಮಿ.ಮೀ. ಮಳೆ ದಾಖಲಾಗಿದೆ.
ಮಳೆಯಿಂದ ತುಂಗಾ ನದಿಯೂ ತುಂಬಿ ಹರಿಯುತ್ತಿದ್ದು, ಅಣೆಕಟ್ಟಿನಿಂದ 89,503 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ 140.66 ಮಿ.ಮೀ. ಮಳೆ ದಾಖಲಾಗಿದೆ. ತಾಲ್ಲೂಕುವಾರು ಮಳೆ ಪ್ರಮಾಣ ಹೀಗಿದೆ:
ತೀರ್ಥಹಳ್ಳಿ – 272.10 ಮಿ.ಮೀ.
ಹೊಸನಗರ – 267.20 ಮಿ.ಮೀ.
ಸಾಗರ – 173.90 ಮಿ.ಮೀ.
ಸೊರಬ – 138.80 ಮಿ.ಮೀ.
ಶಿಕಾರಿಪುರ – 72.20 ಮಿ.ಮೀ.
ಶಿವಮೊಗ್ಗ – 40.60 ಮಿ.ಮೀ.
ಭದ್ರಾವತಿ – 19.80 ಮಿ.ಮೀ. (ಅತ್ಯಂತ ಕಡಿಮೆ)
ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ, ಈಗ ಸುರಿಯುತ್ತಿರುವ ಮಳೆಯಿಂದ ರೈತರಲ್ಲಿ ಆಶಾಭಾವನೆ ಮೂಡಿದೆ.
ಭದ್ರಾ, ತುಂಗಾ, ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆಗಾರರು, ಇನ್ನೂ 8ರಿಂದ 10 ದಿನಗಳ ಕಾಲ ಇದೇ ರೀತಿ ಉತ್ತಮ ಮಳೆ ಮುಂದುವರಿದರೆ ಜಲಾಶಯಗಳು ಭರ್ತಿಯಾಗಲಿದ್ದು, ಕೃಷಿಗೂ ಸಾಕಷ್ಟು ನೀರು ಲಭ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.