ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮಿತ್ರ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಗೊಂಡಿದೆ. ಬಿಡದಿಯ ಬೈರಮಂಗಲದಿಂದ ಇಂದಿನಿಂದ ಮೂರು ದಿನಗಳವರೆಗೆ 38 ಕಿ.ಮೀ. ದೂರದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಸರ್ಕಾರದ ಉದ್ದೇಶಿತ ಬಿಡದಿ ಟೌನ್ಶಿಪ್ (Bidadi Township) ಯೋಜನೆಯನ್ನು ವಿರೋಧಿಸಿ ಇಂದು ಆರಂಭವಾಗಿರುವ ಬೃಹತ್ ಪಾದಯಾತ್ರೆಗೆ ಮುನ್ನ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಆಶೀರ್ವಾದ ಪಡೆದರು.
ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರನ್ನು ಭೇಟಿ ಮಾಡಿ ಪಾದಯಾತ್ರೆಯ ವಿವರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಿಖಿಲ್ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು.
ರೈತರ ಹಿತಕ್ಕಾಗಿ, ರೈತರ ಭೂಮಿಯನ್ನು ಉಳಿಸಲು ಈ ಹೋರಾಟ ಮಾಡುತ್ತಿದ್ದೀರಿ. ದೃಢವಾಗಿ ನಿಂತು ಹೋರಾಡಿ, ಜನರ ಬೆಂಬಲ ನಿಮ್ಮೊಂದಿಗಿದೆ ಎಂದು ದೇವೇಗೌಡರು ನಿಖಿಲ್ ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಇತ್ತ ಬಿಡದಿ ಟೌನ್ಶಿಪ್ ಪಾದಯಾತ್ರೆ ಯಶಸ್ವಿಯಾಗಲೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್ ಡಿ ರೇವಣ್ಣ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದರು. ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆ ಯಶಸ್ಸು ಕೋರಿದರು.
ಪಾದಯಾತ್ರೆ ಸಾಗುವ ಮಾರ್ಗ: ಬೈರಮಂಗಲ ವೃತ್ತದಿಂದ ಆರಂಭವಾದ ಪಾದಯಾತ್ರೆ ಸಂಜೆ ಬಿಡದಿಯ ಸಜ್ಜನ್ರಾವ್ ವೃತ್ತ ತಲುಪಲಿದ್ದು, ಅಲ್ಲಿಂದ ಹೆದ್ದಾರಿ ಮುಖಾಂತರ ನೈಸ್ ರೋಡ್ ಜಂಕ್ಷನ್ಗೆ ಸೇರಲಿದೆ. ಆಗಸ್ಟ್ 10ರಂದು ಜೆಕೆ ಟೈರ್ ಗೇಟ್ ಹಾಗೂ ನೈಸ್ ರೋಡ್ ಜಂಕ್ಷನ್ ಮೂಲಕ ಪಾದಯಾತ್ರೆ ಮುಂದುವರೆಯಲಿದೆ. ಆಗಸ್ಟ್ 11ರಂದು ಬೆಂಗಳೂರು ನಗರದ ಹೊರವಲಯಕ್ಕೆ ಪಾದಯಾತ್ರೆ ಸಾಗಿ, ಅಂತ್ಯಗೊಳ್ಳಲಿದೆ.
ಬಳಿಕ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕರು, ಬೆಂಗಳೂರು ದಕ್ಷಿಣ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು, ವಿವಿಧೆಡೆಯಿಂದ ಸುಮಾರು 25 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ರಂಗಗಳ ನಾಯಕರು ಪಾದಯಾತ್ರೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.