ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ತಾಜ್ ಹೋಟೆಲ್ನಲ್ಲಿ ಬೆಚ್ಚಿಬೀಳಿಸುವಂತಹ ಘೋರ ಕೃತ್ಯ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.
ವಿಮಾನ ನಿಲ್ದಾಣ ಬಳಿ ಇರುವ ತಾಜ್ ಹೋಟೆಲ್ನ 4ನೇ ಮಹಡಿಯ ರೂಮ್ನಲ್ಲಿ ಈ ಭೀಕರ ಅವಳಿ ಕೊಲೆ ನಡೆದಿದ್ದು, ಹತ್ಯೆಯಾದ ಮಕ್ಕಳನ್ನ ಶೇಕ್ ಜೆಹರಾ(5 ವರ್ಷ), ಶೇಕ್ ಜೋಯಾ(10 ವರ್ಷ) ಎಂದು ಗುರುತಿಸಲಾಗಿದೆ.
ಕೊಲೆ ಮಾಡಿದ ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ತನ್ನ 5 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಕ್ಕಳನ್ನ ಹತ್ಯೆ ಮಾಡಲು ಹೋಟೆಲ್ನಲ್ಲಿ ಮುಂಚಿತವಾಗಿಯೇ ರೂಂ ಬುಕ್ ಮಾಡಿದ್ದ ಎನ್ನಲಾಗಿದೆ. ಕೃತ್ಯದ ಬಳಿಕ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇಮ್ರಾನ್ ಮೂಲತಃ ಬೆಂಗಳೂರಿನ ನಾಗವಾರದ ನಿವಾಸಿಯಾಗಿದ್ದು, ಜಿಮ್ಮಿ ಕ್ಯಾಬ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ. ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಇಮ್ರಾನ್ನನ್ನ ಸದ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಏರ್ಪೋರ್ಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.