ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತು ಯಾವುದೇ ಗೊಂದಲವಿಲ್ಲ, ಈ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಲು ನವದೆಹಲಿಗೆ ಹೋಗಿದ್ದು ಅವರು ಮರಳಿ ಬಂದ ನಂತರ ಖಾತೆಗಳನ್ನು ಘೋಷಿಸಬಹುದು ಎಂದಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸಿಎಂ ದೆಹಲಿಗೆ ಹೋಗಿದ್ದಾರೆ. ಅವರು ಇಂದು ವಾಪಸ್ ಬಂದ ನಂತರ ಖಾತೆಗಳ ಹಂಚಿಕೆ ಘೋಷಣೆ ಮಾಡುವ ಭರವಸೆಯಿದೆ ಎಂದಿದ್ದಾರೆ.
ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಮತ್ತು ಉತ್ತರಿಸುವುದು ಅವರಿಗೆ ಕಷ್ಟವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತಿರಿಸಿದ ಪರಮೇಶ್ವರ್, ಅವರೆಲ್ಲರೂ ಸಮರ್ಥರಿರುವುದರಿಂದ ಮತ್ತು ಅವರಿಗೆ ಸಹಾಯ ಮಾಡಲು ಹಿರಿಯರು ಇರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.
ಹೊಸದಾಗಿ ಸಚಿವರಾದವರು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು. ಆದರೆ ಅವರಿಗೆ ತಿಳಿಸಲು ಅಧಿಕಾರಿಗಳು ಇರುತ್ತಾರೆ. ಕಾಲಾನಂತರದಲ್ಲಿ, ಅವರು ವಿಷಯಗಳನ್ನು ಕಲಿಯುತ್ತಾರೆ. ನಾವು ಹೊಸ ಸಚಿವರಾಗಿದ್ದಾಗ ನಾವು ಸಹ ಅದನ್ನು ಎದುರಿಸಿದ್ದೇವೆ. ಆಡಳಿತವನ್ನು ಕಲಿತ ನಂತರ, ವಿಷಯಗಳು ಸರಿಯಾಗುತ್ತವೆ. ಅವರು ಶಾಸಕರಾಗಿರುವುದರಿಂದ, ಅವರಿಗೆ ವಿಷಯಗಳು ಹೊಸತಾಗಿರುವುದಿಲ್ಲ ಎಂದು ಅವರು ಹೇಳಿದರು.
ನಿನ್ನೆ ಸಂಜೆಯಿಂದ ದೆಹಲಿಯಲ್ಲಿರುವ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಪಕ್ಷದ ಮೂಲಗಳ ಪ್ರಕಾರ, ಆಗಸ್ಟ್ 3 ರಂದು ಸಂಪುಟಕ್ಕೆ ಸೇರ್ಪಡೆಗೊಂಡ 19 ಹೊಸ ಸಚಿವರಿಗೆ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅವರು ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಆಗಸ್ಟ್ 13 ರಿಂದ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಿಎಂ ಬಯಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.