ಮೈಸೂರು ರಸ್ತೆ ಮೇಲ್ಸೇತುವೆ 
ರಾಜ್ಯ

ಬೆಂಗಳೂರಿನ ಮೊದಲ ಫ್ಲೈಓವರ್‌ಗೆ ಕಾಯಕಲ್ಪ: 6 ವರ್ಷಗಳ ಬಳಿಕ ಸುದೀರ್ಘ ದುರಸ್ತಿ ಕಾರ್ಯ!

ಆರು ವರ್ಷಗಳ ಬಳಿಕ ಸುಮಾರು ಮೂರು ದಶಕಗಳಷ್ಟು ಹಳೆಯದಾದ ಸಿರ್ಸಿ ಸರ್ಕಲ್ ಫ್ಲೈಓವರ್‌ಗೆ (ಅಧಿಕೃತವಾಗಿ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್) ದೊಡ್ಡ ಮಟ್ಟದ ನಿರ್ವಹಣಾ ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆದಿದೆ.

ಬೆಂಗಳೂರು: ಬೆಂಗಳೂರಿನ ಮೊದಲ ಫ್ಲೈಓವರ್‌ ಗೆ ಕೊನೆಗೂ ಕಾಯಕಲ್ಪದ ಸಮಯ ಬಂದಿದ್ದು, ಬರೊಬ್ಬರಿ 9.6 ಕೋಟಿ ರೂ ವೆಚ್ಚದಲ್ಲಿ ಸರ್ಕಾರ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.

ಹೌದು.. ಆರು ವರ್ಷಗಳ ಬಳಿಕ ಸುಮಾರು ಮೂರು ದಶಕಗಳಷ್ಟು ಹಳೆಯದಾದ ಸಿರ್ಸಿ ಸರ್ಕಲ್ ಫ್ಲೈಓವರ್‌ಗೆ (ಅಧಿಕೃತವಾಗಿ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್) ದೊಡ್ಡ ಮಟ್ಟದ ನಿರ್ವಹಣಾ ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆದಿದೆ.

ನಗರದ ಅತ್ಯಂತ ವಾಹನ ದಟ್ಟಣೆಯ ಜಂಕ್ಷನ್‌ಗಳಲ್ಲಿ ಒಂದರ ಮೇಲಿಂದ ಸಂಚಾರವನ್ನು ಸಾಗಿಸುವ ಈ ಫ್ಲೈಓವರ್‌ನ ರಸ್ತೆ ಮೇಲ್ಮೈಯನ್ನು ಸಂಪೂರ್ಣವಾಗಿ ಮರುಡಾಂಬರೀಕರಣ ಮಾಡಲಾಗುತ್ತದೆ. ರ‍್ಯಾಂಪ್‌ಗಳಿಗೂ ಹೊಸ ಡಾಂಬರು ಹಾಕಲಾಗುತ್ತಿದ್ದು, ಬೇರಿಂಗ್‌ಗಳು ಮತ್ತು ಎಕ್ಸ್‌ಪ್ಯಾನ್ಷನ್ ಜಾಯಿಂಟ್‌ಗಳನ್ನು ಬದಲಾಯಿಸುವುದರ ಜೊತೆಗೆ ಇತರ ನಿರ್ವಹಣಾ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತದೆ.

ಫ್ಲೈಓವರ್‌ನ ಡಾಂಬರು ಮೇಲ್ಮೈ ಹದಗೆಟ್ಟಿರುವುದು, ಭಾರಿ ಮಳೆಯ ಸಂದರ್ಭದಲ್ಲಿ ನೀರು ನಿಲ್ಲುವುದು, ಚರಂಡಿಗಳು ಕಟ್ಟಿಕೊಂಡಿರುವುದು, ಮೂಲೆಮೂಲೆಗಳಲ್ಲಿ ಗಿಡಗಳು ಬೆಳೆದಿರುವುದು ಸೇರಿದಂತೆ ವಾಹನ ಸವಾರರಿಂದ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ವಹಣಾ ಯೋಜನೆ ರೂಪಿಸಲಾಗಿದೆ.

ಕಾಮಗಾರಿಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿಯನ್ನು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಸಿದ್ಧಪಡಿಸುತ್ತಿದೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದ ವೇಳೆಗೆ ಡಿಪಿಆರ್ ಸಿದ್ಧವಾಗುವ ನಿರೀಕ್ಷೆಯಿದೆ. ಈ ಯೋಜನೆಗೆ ಬಿಬಿಸಿಸಿ 9.6 ಕೋಟಿ ರೂ ಮೀಸಲಿಟ್ಟಿದೆ.

ಹಂತ ಹಂತ ಕಾಮಗಾರಿ

2020ರಲ್ಲಿ ಕೊನೆಯ ಬಾರಿಗೆ ಫ್ಲೈಓವರ್‌ಗೆ ಡಾಂಬರೀಕರಣ ಹಾಗೂ ಪ್ರಮುಖ ನಿರ್ವಹಣಾ ಕಾಮಗಾರಿ ನಡೆಸಲಾಗಿತ್ತು. ಬಳಿಕ ರಸ್ತೆ ಮೇಲ್ಮೈ ಹದಗೆಟ್ಟಿದ್ದು, ಇದೀಗ ಅದನ್ನು ಸಂಪೂರ್ಣವಾಗಿ ನವೀಕರಿಸುವ ಅಗತ್ಯವಿದೆ ಎಂದು ಬಿಬಿಸಿಸಿ ಮುಖ್ಯ ಎಂಜಿನಿಯರ್ ವಿಜಯ್‌ಕುಮಾರ್ ಹರಿದಾಸ್ ತಿಳಿಸಿದ್ದಾರೆ.

1998ರಲ್ಲಿ ಉದ್ಘಾಟನೆಯಾದ 2.65 ಕಿ.ಮೀ. ಉದ್ದದ ಈ ಫ್ಲೈಓವರ್ ನಗರದ ಅತ್ಯಂತ ಹಳೆಯ ಫ್ಲೈಓವರ್‌ಗಳ ಪೈಕಿ ಒಂದಾಗಿದೆ. ಕೇಂದ್ರ ಬೆಂಗಳೂರನ್ನು ಮೈಸೂರು ರಸ್ತೆ ಕಾರಿಡಾರ್‌ಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಹಿನ್ನೆಲೆಯಲ್ಲಿ, ಫ್ಲೈಓವರ್ ಅನ್ನು ಒಂದೇ ಬಾರಿಗೆ ಸಂಪೂರ್ಣವಾಗಿ ಬಂದ್ ಮಾಡದಿರಲು ನಾಗರಿಕ ಸಂಸ್ಥೆ ನಿರ್ಧರಿಸಿದೆ. ಬದಲಾಗಿ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೊಳ್ಳಲು ಯೋಜಿಸಲಾಗಿದೆ.

“ಡಿಪಿಆರ್ ಕೆಲವೇ ವಾರಗಳಲ್ಲಿ ಸಿದ್ಧವಾಗಲಿದೆ. ಅನುಮೋದನೆ ದೊರೆತ ಬಳಿಕ ಮೊದಲ ಹಂತದಲ್ಲಿ ಈಗಿರುವ ಡಾಂಬರು ಪದರವನ್ನು ತೆಗೆದುಹಾಕಲಾಗುತ್ತದೆ. ಬಳಿಕ ಹೊಸ ಡಾಂಬರು ಹಾಕಲಾಗುತ್ತದೆ. ಫ್ಲೈಓವರ್‌ನಲ್ಲಿರುವ ಎಲ್ಲಾ ಎಕ್ಸ್‌ಪ್ಯಾನ್ಷನ್ ಜಾಯಿಂಟ್‌ಗಳು ಮತ್ತು ಬೇರಿಂಗ್‌ಗಳನ್ನು ಬದಲಾಯಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಗಿಡಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತದೆ. ಸ್ವಚ್ಛತಾ ಕಾರ್ಯ ಸೇರಿದಂತೆ ಇತರ ಅಗತ್ಯ ನಿರ್ವಹಣಾ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುತ್ತದೆ” ಎಂದು ಹರಿದಾಸ್ ತಿಳಿಸಿದ್ದಾರೆ.

ಮೇಲ್ಸೇತುವೆ ಸಂಪೂರ್ಣ ಬಂದ್ ಇಲ್ಲ

ಕಾಮಗಾರಿ ಆರಂಭವಾದ ಬಳಿಕ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು. ಆದರೆ ಈ ಅವಧಿಯಲ್ಲಿ ಫ್ಲೈಓವರ್ ಅನ್ನು ಯಾವುದೇ ಹಂತದಲ್ಲೂ ಸಂಪೂರ್ಣವಾಗಿ ಬಂದ್ ಮಾಡುವುದಿಲ್ಲ. ನಿರ್ವಹಣಾ ಕಾಮಗಾರಿ ನಡೆಯುವ ವೇಳೆ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಸದಾ ಅವಕಾಶ ಕಲ್ಪಿಸಲು ನಾಗರಿಕ ಸಂಸ್ಥೆ ಯೋಜಿಸಿದೆ.

ನಗರದ ಪ್ರಮುಖ ಹಾಗೂ ವಾಹನ ದಟ್ಟಣೆಯ ಕಾರಿಡಾರ್‌ನಲ್ಲಿ ಸಂಚಾರಕ್ಕೆ ಕನಿಷ್ಠ ಅಡ್ಡಿಯಾಗುವಂತೆ ಹಂತ ಹಂತವಾಗಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ ಎಂದು ಹರಿದಾಸ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ

ಮಿಸ್ ಆಯ್ತು ಸಚಿವ ಸ್ಥಾನ; ‘ಶಕ್ತಿ ಪ್ರದರ್ಶನ’ಕ್ಕೆ ಸಜ್ಜಾದ ಸಿದ್ದರಾಮಯ್ಯ ಆಪ್ತರು! ಮೈಸೂರಿನಲ್ಲಿ ‘ಅಸಮಾಧಾನ’ ಸಭೆ!