ಬೀದರ್: ಇಡೀ ರಾಜ್ಯವನ್ನೆ ಬೆಚ್ಚಿ ಬಿಳಿಸಿದ್ದ ಬೀದರ್ ಎಟಿಎಂ ದರೋಡೆ ಹಾಗೂ ವ್ಯಾನ್ ಸಿಬ್ಬಂದಿಗೆ ಗುಂಡಿಕ್ಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾದ್ದಾರೆ.
ದರೋಡೆ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಬಿಹಾರದ ವೈಶಾಲಿ ಜಿಲ್ಲೆಯ ಫತೇಪುರ್ ಫುಲ್ವಾರಿಯಾ ನಿವಾಸಿ ಅಮನ್ ಕುಮಾರ್ ಮತ್ತು ಬಿಹಾರದ ವೈಶಾಲಿ ಜಿಲ್ಲೆಯ ಜನದಾಹಾ ಬಳಿಯ ಮಹಿಸೂರ್ ನಿವಾಸಿ ಅಲೋಕ್ ಕುಮಾರ್ ಅಕಾ ಅಶುತೋಷ್ ನನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಈ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಎಂಬ ಗ್ರಾಮದಲ್ಲಿ ಈ ಇಬ್ಬರು ದರೋಡೆಕೋರರ ಪ್ರಯಾಣಿಸುತ್ತಿದ್ದ ಕಾರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಪ್ಪತ್ತು ದಿನಗಳ ಹಿಂದೆಯೇ ಆರೋಪಿಗಳ ಸುಳಿವು ಬೀದರ್ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ, ಇಪ್ಪತ್ತು ದಿನಗಳಿಂದ ನಿರಂತರವಾಗಿ ಆರೋಪಿಗಳನ್ನ ಬೀದರ್ ಪೊಲೀಸರು ವಾಚ್ ಮಾಡಿದ್ದಾರೆ. ಬೀದರ್ ಎಸ್ಪಿ ಪ್ರದೀಪ್ ಗುಂಟಿ ನೇತೃತ್ವದ ತಂಡದಿಂದ ಆಪರೇಷನ್ ಮಾಡಿ ಇಂದು ಮಧ್ಯಾಹ್ನ ಇಬ್ಬರು ದರೋಡೆಕೋರರನ್ನು ಬಂಧಿಸಿ ಬೀದರ್ಗೆ ಕರೆತರುತ್ತಿದ್ದಾರೆ.
ಕಳೆದ ವರ್ಷ ಜನವರಿ 16 ರಂದು ಬೀದರ್ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮುಖ್ಯ ಶಾಖೆಯ ಮುಂಭಾಗದಲ್ಲಿ ಹಾಡಹಗಲೇ ಬೈಕ್ನಲ್ಲಿ ಬಂದು ದರೋಡೆಕೋರರು ದರೋಡೆ ಮಾಡಿದ್ದರು.
ಈ ವೇಳೆ ಎಂಎಸ್ ಏಜೆನ್ಸಿ ಸಿಬ್ಬಂದಿಯೋರ್ವನನ್ನು ಕೊಂದು ಇಬ್ಬರು ಖದೀಮರು 83 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ. ದರೋಡೆಕೋರರ ಶೂಟೌಟ್ಗೆ ಗಿರಿ ವೆಂಕಟೇಶ್ ಎಂಬ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಶಿವಕುಮಾರ್ ಗುನ್ನಳ್ಳಿ ಗಂಭೀರವಾಗಿ ಗಾಯಗೊಂಡಿದ್ದರು.