ಚಿತ್ರದುರ್ಗ: ಏಳುಸುತ್ತಿನ ಕೋಟೆಯೇ ಇರಲಿ, ಜೋಗದ ಗುಂಡಿಯೇ ಇರಲಿ ಯಾವುದೇ ವಸ್ತುವಿಲ್ಲದೇ, ಬರಿಗೈನಲ್ಲಿ ಕೋಟೆ, ಕೊತ್ತಲಗಳನ್ನು, ಗುಂಡಿ ಬೆಟ್ಟಗಳನ್ನು ಸರಸರನೆ ಹತ್ತಿ ಇಳಿಯುವ ಚಿತ್ರದುರ್ಗದ ‘ಮಂಕಿಮ್ಯಾನ್’ ಖ್ಯಾತಿಯ ಜ್ಯೋತಿರಾಜ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಜ್ಯೋತಿರಾಜ್ ಅವರು ಈ ಹಿಂದೆ 2019 ರಲ್ಲಿ ಜೋಗ ಜಲಪಾತದಲ್ಲಿ ಕಾಣೆಯಾದವರನ್ನು ಹುಡುಕಲು ಫಾಲ್ಸ್ಗೆ ಇಳಿದು ಕಾಣೆಯಾಗಿದ್ದರಿಂದ ಅವರ ಮದುವೆ ಮುರಿದು ಬಿದ್ದಿತ್ತು. ಇದೀಗ ಆರೇಳು ವರ್ಷಗಳ ಬಳಿಕ ಜ್ಯೋತಿರಾಜ್ 'ನಿವೇದಿತಾ' ಎಂಬವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಎರಡು ಕುಟುಂಬದಲ್ಲಿ ಖುಷಿ ಮನೆ ಮಾಡಿದ್ದು, ಸ್ವತಃ ಮದುವೆಗೆ ಬನ್ನಿ ಎಂದು ಅಭಿಮಾನಿಗಳಿಗೆ, ಜನ ಸಾಮಾನ್ಯರಿಗೆ ಕೋತಿರಾಜ್ ಮನವಿ ಮಾಡಿದ್ದಾರೆ.
ಜ್ಯೋತಿರಾಜ್ ಅವರು ತಮ್ಮ ಮದುವೆಯ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಎಲ್ಲರಿಗೂ ನಮಸ್ಕಾರ. ಬರುವ 23 ಹಾಗೂ 24 ರಂದು ನನ್ನ ಮದುವೆ ಇದೆ. ಕರ್ನಾಟಕದ ಜನತೆ ನಮಗೆ ಆಶೀರ್ವಾದ ಮಾಡಿ. ನಾನು ನಂಬಿದ ದೈವ ಅಮ್ಮ ಏಕನಾತೇಶ್ವರಿ, ಈಕೆ ಕುಣಿಸಿದಂಗೆ ಕುಣಿಯುತ್ತಿದ್ದೇನೆ’ ಎಂದು ಎಲ್ಲರನ್ನು ಮದುವೆಗೆ ಆಹ್ವಾನಿಸಿದ್ದಾರೆ.
ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಈ ನಿವೇದಿತಾ ಯಾರು?
ಜ್ಯೋತಿರಾಜ್ ಅವರ ಜೋತೆ ನಿವೇದಿತಾ ಅವರ ಮದುವೆ ನಿಶ್ಚಯವಾಗಿದೆ. ನಿವೇದಿತಾ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವಾಸಿ. ಪದವಿ ಪಡೆದಿರುವ ನಿವೇದಿತಾ ಅವರೇ ಜ್ಯೋತಿರಾಜ್ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.
ಇದೇ ಆಗಸ್ಟ್ 22, ಶನಿವಾರ ಹಾಗೂ ಆಗಸ್ಟ್ 23 ಭಾನುವಾರದಂದು ಚಿತ್ರದುರ್ಗದ ವೈಭವ ಗಾರ್ಡನ್ನಲ್ಲಿ ಜ್ಯೋತಿರಾಜ್ ಹಾಗೂ ನಿವೇದಿತಾ ಮದುವೆ ಸಮಾರಂಭ ನಡೆಯಲಿದೆ.
ಜ್ಯೋತಿರಾಜ್ ಸಾಹಸಕ್ಕೆ ನಿವೇದಿತಾ ಫಿದಾ!
ಜ್ಯೋತಿರಾಜ್ ಭಾವೀ ಪತ್ನಿ ನಿವೇದಿತಾ ಅವರಿಗೆ ಜ್ಯೋತಿರಾಜ್ ಮಾಡೋ ಸಾಹಸಗಳು ಇಷ್ಟವಂತೆ. ಅವರ ಸಾಹಸ ಪ್ರವೃತ್ತಿಯನ್ನು ಮೆಚ್ಚಿಯೇ ಜ್ಯೋತಿರಾಜ್ ಜೊತೆ ಮದುವೆ ಮಾಡಿಕೊಳ್ಳಲು ನಿವೇದಿತಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನು ನಮ್ಮ ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ಆಗಲು ಒತ್ತಾಯಿಸಿದ್ದರು. ಆದರೆ, ನಾನು ಕನ್ನಡಿಗನಾಗಿ, ಚಿತ್ರದುರ್ಗದಲ್ಲೇ ಮದುವೆ ಆಗುತ್ತಿದ್ದೇನೆ ಅಂತ ಜ್ಯೋತಿರಾಜ್ ಹೇಳಿದ್ದಾರೆ.