ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ನಾಗೇಂದ್ರ ಪರವಾಗಿ ವಿಧಾನಸಭೆಯಲ್ಲಿ ಸಮರ್ಥನೆ ನೀಡಿದ್ದಾರೆ.
ಎಸ್ಐಟಿ ಸಲ್ಲಿಸಿರುವ ಪ್ರಾಥಮಿಕ ಹಾಗೂ ಹೆಚ್ಚುವರಿ ಆರೋಪಪಟ್ಟಿಗಳಲ್ಲಿ ನಾಗೇಂದ್ರ ಅವರನ್ನು ಆರೋಪಿಯೆಂದು ಹೆಸರಿಸಲಾಗಿಲ್ಲ. ಅಲ್ಲದೆ, ಯಾವುದೇ ನ್ಯಾಯಾಲಯವೂ ಅವರನ್ನು ತಪ್ಪಿತಸ್ಥರೆಂದು ಘೋಷಿಸಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾಗೇಂದ್ರ ವಿರುದ್ಧ ಪ್ರತಿಪಕ್ಷ ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಸದನದ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ತೆರಿಗೆದಾರರ ಹಣದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಸದನದ ಚರ್ಚೆಗಳು ಜನರ ಆಶೋತ್ತರಗಳಿಗೆ ಅನುಗುಣವಾಗಿರಬೇಕು ಎಂದು ಹೇಳಿದರು.
ಇದೇ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿವರ ನೀಡಿದ ಪರಮೇಶ್ವರ್ ಅವರು, ಅಂದಿನ ವ್ಯವಸ್ಥಾಪಕ ನಿರ್ದೇಶಕರು ವಿವಿಧ ಬ್ಯಾಂಕ್ ಖಾತೆಗಳಿಂದ ರೂ.187.33 ಕೋಟಿ ವರ್ಗಾವಣೆ ಮಾಡಿದ್ದರು. ಈ ರೀತಿ ಹಣ ವರ್ಗಾವಣೆ ಮಾಡುವ ಅಧಿಕಾರ ಎಂಡಿಗೆ ಇತ್ತು. ಇದಕ್ಕೆ ಸಚಿವರು ಅಥವಾ ರಾಜ್ಯ ಸರ್ಕಾರದ ಅನುಮತಿ ಅಗತ್ಯವಿರಲಿಲ್ಲ. ಈ ಪೈಕಿ ರೂ.89.63 ಕೋಟಿಯನ್ನು 18 ಅಪರಿಚಿತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು.
2024ರ ಮೇ ತಿಂಗಳಲ್ಲಿ ಅಧೀಕ್ಷಕ ಪಿ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಬ್ಯಾಂಕ್ ಹಾಗೂ ಅಕ್ರಮದಲ್ಲಿ ಭಾಗಿಯಾಗಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಿತ್ತು. 2024ರ ಜೂನ್ನಲ್ಲಿ ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು ಎಂದು ವಿವರಿಸಿದರು.
ಸಿಐಡಿ 14 ಆರೋಪಿಗಳನ್ನು ಬಂಧಿಸಿದ್ದು, ರೂ.16.83 ಕೋಟಿ ನಗದು, ಚಿನ್ನದ ಗಟ್ಟಿಗಳು, ಆಭರಣಗಳು, ಐಷಾರಾಮಿ ಕಾರು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆ ರೂ.79.68 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಉಳಿದ ರೂ.4.94 ಕೋಟಿ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಎಸ್ಐಟಿ 2024ರ ಆಗಸ್ಟ್ 5ರಂದು ಪ್ರಾಥಮಿಕ ಆರೋಪಪಟ್ಟಿ ಹಾಗೂ 2025ರ ನವೆಂಬರ್ 10ರಂದು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿತ್ತು. ಆದರೆ, ಎರಡೂ ಆರೋಪಪಟ್ಟಿಗಳಲ್ಲೂ ನಾಗೇಂದ್ರ ಅವರ ಹೆಸರನ್ನು ಆರೋಪಿಯಾಗಿ ಸೇರಿಸಲಾಗಿಲ್ಲ. ಬಳಿಕ ಇ.ಡಿ. ತನ್ನ ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಿದೆ ಎಂದರು.
ಆದರೆ, 2024ರ ಅಕ್ಟೋಬರ್ 14ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಗೇಂದ್ರ ಅವರಿಗೆ ಜಾಮೀನು ನೀಡಿತ್ತು. ಇದೇ ರೀತಿ 2026ರ ಜನವರಿ 14ರಂದು ಸಿಬಿಐ ಪ್ರಕರಣದಲ್ಲೂ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ರಾಜ್ಯ ಸಿಐಡಿಯ ಎಸ್ಐಟಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಗುರುತಿಸಿ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದೆ. ಎಸ್ಐಟಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವ್ಯಕ್ತಿ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ, ಇ.ಡಿ. ಮತ್ತು ಸಿಬಿಐ ಕಾರ್ಯವೈಖರಿ ಕುರಿತು ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್ಗಳು ವ್ಯಕ್ತಪಡಿಸಿರುವ ಅಸಮಾಧಾನವನ್ನೂ ಪರಮೇಶ್ವರ್ ಅವರು ಪ್ರಸ್ತಾಪಿಸಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿ ಈ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುವ ರೀತಿಯ ಬಗ್ಗೆಯೂ ನ್ಯಾಯಾಲಯಗಳು ಅಸಮಾಧಾನ ವ್ಯಕ್ತಪಡಿಸಿವೆ ಎಂದು ಹೇಳಿದರು.
ದೇಶದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ಪೈಕಿ 4,192 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಇದರಲ್ಲಿ 251 ಲೋಕಸಭಾ ಸದಸ್ಯರು ಹಾಗೂ 75 ರಾಜ್ಯಸಭಾ ಸದಸ್ಯರು ಸೇರಿದ್ದಾರೆ ಎಂದರು.
ಇದೇ ವೇಳೆ 14 ಹಾಲಿ ಮುಖ್ಯಮಂತ್ರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳಿವೆ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಅವರು, “ನಾಗೇಂದ್ರ ಅವರನ್ನು ಯಾವುದೇ ನ್ಯಾಯಾಲಯವೂ ತಪ್ಪಿತಸ್ಥರೆಂದು ಘೋಷಿಸಿಲ್ಲ” ಎಂದು ಪುನರುಚ್ಚರಿಸಿದರು.