ಬೆಂಗಳೂರು: ರಾಜ್ಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಬಗರ್ ಹುಕುಂ (ಅಕ್ರಮ-ಸಕ್ರಮ) ಭೂಮಿ ಮಂಜೂರಾತಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ಸರ್ಕಾರಿ ತಂತ್ರಾಂಶವನ್ನು (Software) ಮೇಲ್ದರ್ಜೆಗೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರು ಬಾಕಿ ಇರುವ ಅರ್ಜಿಗಳು ಹಾಗೂ ಬಗೈರ್ ಹುಕುಂ ತಂತ್ರಾಂಶದಲ್ಲಿನ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಭೂಕಂದಾಯ ಕಾಯ್ದೆ-1964ರ ಸೆಕ್ಷನ್ 94ರ ಅಡಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
2023ರ ಸೆಪ್ಟೆಂಬರ್ 26ರಿಂದ 2024ರ ಜನವರಿ 21ರವರೆಗೆ 50-53 ನಮೂನೆಗಳಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸರ್ಕಾರದ ವೆಬ್ಸೈಟ್ನಲ್ಲಿ ವಿಲೇವಾರಿಗಾಗಿ ಸ್ವೀಕರಿಸಲಾಗಿತ್ತು. ಈ ಅರ್ಜಿಗಳು ಪ್ರಸ್ತುತ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ ಎಂದು ಹೇಳಿದರು.
ಈ ಕುರಿತು ಡಿಸಿಎಂ ನೀಡಿದ ಲಿಖಿತ ಉತ್ತರದಲ್ಲಿ, ಭೂಮಿ ಮಂಜೂರಾಗಿದ್ದು, ಸಾಗುವಳಿ ಚೀಟಿ ನೀಡಲಾಗಿದ್ದರೂ ಖಾತೆಯಲ್ಲಿ ದಾಖಲಾಗದ ಪ್ರಕರಣಗಳನ್ನು 50-53 ನಮೂನೆಗಳ ಭೌತಿಕ ಪರಿಶೀಲನಾ ಸಮಿತಿಯಲ್ಲಿ ಪರಿಶೀಲಿಸಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕಂದಾಯ ಆಯುಕ್ತಾಲಯದ ನಿರ್ದೇಶನದಂತೆ, ಇಂತಹ ಬಾಕಿ ಪ್ರಕರಣಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮೊದಲು ಪ್ರೊಫಾರ್ಮಾ 1-5 ತಂತ್ರಾಂಶದಲ್ಲಿ ದಾಖಲಿಸಬೇಕು. ಬಳಿಕ ಅವುಗಳನ್ನು ಪ್ರೊಫಾರ್ಮಾ-1 ವ್ಯವಸ್ಥೆಗೆ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ.
ನಂತರ ಈ ಪ್ರಕರಣಗಳನ್ನು ಬಗರ್ ಹುಕುಂ ತಂತ್ರಾಂಶಕ್ಕೆ ವರ್ಗಾಯಿಸಿ, ಖಾತೆಯಲ್ಲಿ ಅಂತಿಮವಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಭೂಮಿ ಮಂಜೂರಾಗಿ, ದಾಖಲಾಗಿರುವ ಖಾತೆದಾರರ ವಿವರಗಳು ಪ್ರೊಫಾರ್ಮಾ 1-5 ತಂತ್ರಾಂಶದಲ್ಲಿ ಲಭ್ಯವಿವೆ. ಆದರೆ, ಬಗರ್ ಹುಕುಂ ಅಡಿಯಲ್ಲಿ ಭೂಮಿ ಮಂಜೂರಾಗಿದ್ದರೂ ಖಾತೆ ದಾಖಲಾತಿ ಮತ್ತು ಸಾಗುವಳಿ ಚೀಟಿ ನೀಡಿಕೆ ಬಾಕಿ ಇರುವ ಪ್ರಕರಣಗಳು ಮಾತ್ರ ಇನ್ನೂ ತಂತ್ರಾಂಶದಲ್ಲಿ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.