ಬೆಂಗಳೂರು: ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಅಂತಾರೆ. ಆದರೆ, ಈ ದೇವರ ಕೆಲಸ ಮಾಡಲು ಹಲವು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಅಂದರೆ, ಸಾರ್ವಜನಿಕರ ಅರ್ಜಿಯನ್ನು ವರ್ಗಾಯಿಸಲು ಅಥವಾ ಕ್ಲಿಯರ್ ಮಾಡಲು ತಡ ಮಾಡುತ್ತಾರೆ. ಹೀಗೆ ತಡ ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಕರ್ನಾಟಕ ಸಕಾಲ ಸೇವೆಗಳ ಕಾಯ್ದೆಗೆ ಮಾಡಲಾದ ತಿದ್ದುಪಡಿ ಮಾಡಿದ್ದು, ಅಂತಹ ಅಧಿಕಾರಿಗಳಿಗೆ ಪ್ರತಿ ಅರ್ಜಿಗೆ ₹500 ಗಳ ದಂಡ ವಿಧಿಸುವ ಕಾನೂನು ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ನಿನ್ನೆ ಅಧಿವೇಶನದ ಕೊನೆಯ ದಿನದಂದು, ಕರ್ನಾಟಕ ವಿಧಾನಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಕೇವಲ 36 ನಿಮಿಷಗಳಲ್ಲಿ 10 ಮಸೂದೆಗಳು ಅಂಗೀಕಾರಗೊಂಡಿವೆ. ಇವುಗಳಲ್ಲಿ, ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ವಿಧೇಯಕ ಕೂಡ ಒಂದು. ಈ ಮಸೂದೆಯ ಪ್ರಕಾರ, ಸೇವೆ ಒದಗಿಸಲು ವಿಳಂಬ ಮಾಡುವ ಸರ್ಕಾರಿ ನೌಕರರ ಮೇಲೆ ವಿಧಿಸಲಾಗುವ ಒಟ್ಟು ಆರ್ಥಿಕ ಹೊಣೆಗಾರಿಕೆಯನ್ನು ಪ್ರತಿ ಅರ್ಜಿಗೆ ಗರಿಷ್ಠ ₹500 ಗಳಿಗೆ ಮಿತಿಗೊಳಿಸಲಾಗಿದೆ. ಇದಲ್ಲದೆ, ಸಕಾಲದ ವ್ಯಾಪ್ತಿಯಲ್ಲಿ ಬರುವ ಮೇಲ್ಮನವಿಗಳು ನ್ಯಾಯಾಲಯದ ದೀರ್ಘ ಪ್ರಕ್ರಿಯೆಗಳಲ್ಲಿ ಸಿಲುಕಿ ನನೆಗುದಿಗೆ ಬೀಳಬಾರದು ಮತ್ತು ಇಲಾಖೆಯ ಒಳಗಡೆಯೇ ತ್ವರಿತವಾಗಿ ಬಗೆಹರಿಯಬೇಕು ಎಂಬ ಉದ್ದೇಶದಿಂದ, ಕಾನೂನುಬದ್ಧವಾಗಿ ಸಕಾಲ ಅಧಿಕಾರಿಗಳಿಗೆ ಸೇರಿದ ವಿಷಯಗಳಲ್ಲಿ ಸಿವಿಲ್ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ ಅಥವಾ ತೀರ್ಪು ನೀಡುವಂತಿಲ್ಲ.
ಆಸ್ತಿಗಳ ಇ-ನೋಂದಣಿಗೆ ಹೊಸ ವ್ಯವಸ್ಥೆ
ಉಪ-ನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರು ಖುದ್ದಾಗಿ ಹಾಜರಾಗದೆ ಆಸ್ತಿಗಳನ್ನು ನೋಂದಾಯಿಸಲು ಅವಕಾಶ ನೀಡುವ ನೋಂದಣಿ ತಿದ್ದುಪಡಿ ಮಸೂದೆಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಈ ಹಿಂದೆ 2024 ರಲ್ಲಿ ತರಲಾಗಿದ್ದ ಇದೇ ರೀತಿಯ ಮಸೂದೆಯನ್ನು ಹಿಂಪಡೆದು, ಹೊಸ ತಿದ್ದುಪಡಿಯೊಂದಿಗೆ ಮಂಡಿಸಲಾಗಿದೆ. ಇದರ ಪ್ರಕಾರ, ಅಧಿಕಾರ ಪತ್ರ ನೀಡುವ ವ್ಯಕ್ತಿಯು ಜೀವಂತವಾಗಿದ್ದಾರೆ ಎಂಬುದಕ್ಕೆ ಪುರಾವೆ ಒದಗಿಸುವುದು ಈಗ ಕಡ್ಡಾಯವಾಗಿದೆ. ಸಂಯೋಜಿತ ಡೇಟಾಬೇಸ್ ಮೂಲಕ ಮೂಲ ದಾಖಲೆಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗದಿದ್ದರೆ ಅಂತಹ ಆಸ್ತಿಗಳ ನೋಂದಣಿಯನ್ನು ತಿರಸ್ಕರಿಸುವ ಅಧಿಕಾರವನ್ನು ಉಪ-ನೋಂದಣಾಧಿಕಾರಿಗಳಿಗೆ ನೀಡಲಾಗಿದೆ. ಪ್ರಮಾಣೀಕೃತ ಪ್ರತಿಗಳನ್ನು ವಿಳಂಬವಿಲ್ಲದೆ ನೀಡಲು ಕೇಂದ್ರೀಕೃತ ವರ್ಚುವಲ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಭೂಕಂದಾಯ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ
ಕರ್ನಾಟಕ ಭೂಕಂದಾಯ ತಿದ್ದುಪಡಿ ಮಸೂದೆಯ ಮೂಲಕ ತನಿಖೆ ನಡೆಸಲು ಯಾವುದೇ ಅಧಿಕಾರಿಯನ್ನು ನೇಮಿಸುವ ಹಕ್ಕನ್ನು ಸರ್ಕಾರ ಪಡೆದುಕೊಂಡಿದೆ. ಜತೆಗೆ ಪ್ರಚೋದನೆ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ ನಿಖರ ವ್ಯಾಖ್ಯಾನಗಳನ್ನು ನೀಡಲಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಡಿ ಶುಲ್ಕವನ್ನು ಡಿಜಿಟಲ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಸುಲಭ ವಹಿವಾಟಿಗೆ ಪೂರಕವಾಗಿ ನಿಯಮಗಳನ್ನು ಸರಳಗೊಳಿಸಲಾಗಿದೆ.