ಬೆಂಗಳೂರು: ಸಾರ್ವಜನಿಕರು ಹೋರಾಟ ಮಾಡೋದೆ ತಮ್ಮ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು. ಆದರೆ, ಹೀಗೆ ಹೋರಾಟ ಮಾಡಬೇಕು ಅಂದರು ಒಂದು ಲಕ್ಷ ರೂಪಾಯಿ ಕಟ್ಟಬೇಕು ಅಂದರೆ ಹೇಗೆ? ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಬರೋಬ್ಬರಿ ₹1 ಲಕ್ಷ ಬಾಡಿಗೆ ಹಾಗೂ ₹10,000 ಮುಂಗಡ ಹಣ ನಿಗದಿ ಪಡಿಸಿದೆ. ಆದರೆ, ಜಿಬಿಎ ಈ ಆದೇಶಕ್ಕೆ ಸಾರ್ವಜನಿಕರು ಮತ್ತು ವಿವಿಧ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಪ್ರತಿಭಟನೆಗೆ ₹1 ಲಕ್ಷ ಬಾಡಿಗೆ, ₹10,000 ಅಡ್ವಾನ್ಸ್
ರಾಜಧಾನಿಯ ಹಲವು ಕಡೆ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ನಡೆಸಿದರೆ ಸೂಕ್ತ, ಸಂಚಾರ ಸಮಸ್ಯೆ ಇರುವುದಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಆಗ ಸರ್ಕಾರ ಸ್ವಾತಂತ್ರ್ಯ ಉದ್ಯಾನವನ್ನು ಆಯ್ಕೆ ಮಾಡಿತು. ತದನಂತರ ಬಡ ಸಂಘಟನೆಗಳು ಹಾಗೂ ಪ್ರತಿಭಟನಾಕಾರರನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಉದ್ದೇಶದಿಂದ 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಫ್ರೀಡಂ ಪಾರ್ಕ್ನಲ್ಲಿಯೇ ಒಂದು ಕಟ್ಟಡ ಉದ್ಘಾಟನೆ ಮಾಡಿದ್ದರು.
ಆದರೆ, ಇತ್ತೀಚೆಗೆ ಈ ಕಟ್ಟಡವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿರುವ ಜಿಬಿಎ ಅಧಿಕಾರಿಗಳು, ಇಲ್ಲಿ ಪ್ರತಿಭಟನೆ ನಡೆಸಲು ದಿನಕ್ಕೆ ₹1 ರೂಪಾಯಿ ಬಾಡಿಗೆ ಮತ್ತು ₹10,000 ರೂಪಾಯಿ ಮುಂಗಡ ಹಣ ಪಾವತಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಅದರಲ್ಲೂ, ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಈ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಮೇಲ್ಭಾಗದ ಸಂಕೀರ್ಣಕ್ಕೆ ಇಷ್ಟು ಭಾರಿ ಮೊತ್ತದ ಶುಲ್ಕ ನಿಗದಿ ಮಾಡಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಹೋರಾಟಗಾರರು ದೂರಿದ್ದಾರೆ.
ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಆಕ್ರೋಶ
ಫ್ರೀಡಂ ಪಾರ್ಕ್ ಒಟ್ಟು 21 ಎಕರೆ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ 5 ಎಕರೆಯನ್ನು ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಮೀಸಲಿಡಲಾಗಿದೆ. ಆದರೆ ಹೋರಾಟಗಾರರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ ದೀಪಗಳಂತಹ ಕನಿಷ್ಠ ಮೂಲಸೌಕರ್ಯಗಳೂ ಇಲ್ಲಿ ಲಭ್ಯವಿಲ್ಲ. ಇಂತಹ ಕೊರತೆಗಳ ನಡುವೆ ಲಕ್ಷ ರೂಪಾಯಿ ಶುಲ್ಕ ವಿಧಿಸಿರುವುದು ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.