ಉಡುಪಿ: ಅರಬ್ಬಿ ಸಮುದ್ರದಲ್ಲಿ ರಭಸವಾದ ಅಲೆಗೆ ಸಿಲುಕಿ ಮೀನುಗಾರಿಕಾ ಬೋಟ್ನ ಹಲಗೆ ಕಿತ್ತುಹೋಗಿ ಮುಳುಗಿದ ಘಟನೆ ಬುಧವಾರ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ. ಬೋಟ್ನಲ್ಲಿದ್ದ 27 ಮಂದಿ ಮೀನುಗಾರರನ್ನು ಸಕಾಲಿಕ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಬುಧವಾರ ಮಧ್ಯಾಹ್ನ ಗಂಗೊಳ್ಳಿ ಮ್ಯಾಂಗನೀಸ್ ಜಟ್ಟಿಯಿಂದ ‘ಶ್ರೀ ಬಾಲಾಂಜನೇಯ’ ಮೀನುಗಾರಿಕಾ ಬೋಟ್ ಅರಬ್ಬಿ ಸಮುದ್ರಕ್ಕೆ ತೆರಳಿತ್ತು.
ಗಂಗೊಳ್ಳಿ ಸೀಮೌತ್ನಿಂದ ಸುಮಾರು 3 ನಾಟಿಕಲ್ ಮೈಲು ದೂರದಲ್ಲಿ, ಮಧ್ಯಾಹ್ನ 3.30ರ ಸುಮಾರಿಗೆ ಸಮುದ್ರದ ರಭಸವಾದ ಅಲೆಯ ಹೊಡೆತಕ್ಕೆ ಬೋಟ್ನ ಹಲಗೆ ಕಿತ್ತುಹೋಗಿದೆ. ಪರಿಣಾಮ ಬೋಟ್ನೊಳಗೆ ನೀರು ನುಗ್ಗಿ ಮುಳುಗಲು ಆರಂಭಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಷಯ ತಿಳಿದ ತಕ್ಷಣ ಗಂಗೊಳ್ಳಿ ಸಿಎಸ್ಪಿ ಠಾಣೆಯ ಪಿಐ ರಮೇಶ್ ಕೆ., ಪಿಎಸ್ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಯುವರಾಜ, ರಾಘವೇಂದ್ರ, ರಮೇಶ್, ನಾಗರಾಜ ಖಾರ್ವಿ, ನಾಗೇಶ್ ಖಾರ್ವಿ, ಕಿರಣ ಮತ್ತು ಕೆಎನ್ಡಿ ಸದಸ್ಯರಾದ ಸಂತೋಷ ಖಾರ್ವಿ, ಸಂದೇಶ್ ಅವರು ‘ಸುಮುಖ’ ಹಾಗೂ ‘ಮತ್ಯಾಮೃತ (ಶ್ರೀನಿಧಿ)’ ಮೀನುಗಾರಿಕಾ ಬೋಟ್ಗಳ ಮೂಲಕ ಸ್ಥಳಕ್ಕೆ ತೆರಳಿ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.