ಬೆಂಗಳೂರು: ರಾಜ್ಯದಲ್ಲಿನ ರೈತರು ಮತ್ತು ಜನಸಾಮಾನ್ಯರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಸಂವೇದನಾಶೀಲತೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪವನ್ನು ಸೋಮವಾರ ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರ ಸಂವೇದನಾರಹಿತವಾಗಿತ್ತು ಎಂದು ಹೇಳಿದರು.
ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಈಗಿನ ಸರ್ಕಾರದ ಆಡಳಿತದ ನೀತಿಗಳು ಮತ್ತು ಹಿಂದಿನ ಬಿಜೆಪಿ ಆಡಳಿತದ ನೀತಿಗಳ ನಡುವೆ ಹೋಲಿಕೆ ಮಾಡಿದರು. ಬಿಜೆಪಿ ಸರ್ಕಾರದ ಆಡಳಿತ ನೀತಿಗಳು ಸಂವೇದನಾರಹಿತವಾಗಿತ್ತು ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳಿಗೆ ಸಂವೇದನೆಯಿಲ್ಲ ಎಂದು ಟೀಕಿಸಿದ್ದೀರಿ. ಆದರೆ ಹಿಂದೆ ಯಡಿಯೂರಪ್ಪನವರು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಅಕ್ಕಿಯನ್ನು ಕಡಿತಗೊಳಿಸಿದಿರಿ, ಯಡಿಯೂರಪ್ಪ ರೈತರು ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರ ಸಂವೇದನಾರಹಿತವಾಗಿತ್ತು. ಅಂತೆಯೇ ಹಿಂದೆ ಇದ್ದ ‘ಅನುಗ್ರಹ ಮತ್ತು ಕೃಷಿ ಭಾಗ್ಯ’ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿತು. ಆದರೆ ನಮ್ಮ ಸರ್ಕಾರ ಸಂವೇದನಾಶೀಲವಾಗಿದೆ.
ಕಬ್ಬುಬೆಳೆಗಾರರಿಗೆ ಕೇಂದ್ರ ಎಫ್ ಆರ್ ಪಿ ನಿಗದಿಗೊಳಿಸಿ, ಹೋರಾಟ ನಡೆಸಿದ ರೈತರೊಂದಿಗೆ ಸಂಧಾನ ನಡೆಸಿ, ಪ್ರತಿ ಟನ್ ಗೆ 3300 ರೂ. ನಿಗದಿಪಡಿಸಿತು. ಇದಕ್ಕಾಗಿ ರಾಜ್ಯದ ಮೇಲೆ 300 ಕೋಟಿ ಹೆಚ್ಚಿನ ಹೊರೆ ಬಿದ್ದಿರೂ, ರೈತರಿಗೆ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2400 ರೂ. ಬೆಂಬಲ ಬೆಲೆ ನಿಗದಿಪಡಿಸಿತು. ಆದರೆ ರಾಜ್ಯ ಸರ್ಕಾರ ರೈತರು ಮತ್ತು ಕಾರ್ಖಾನೆ ಯವರ ಜೊತೆ ಸಂಧಾನ ನಡೆಸಿ, 40 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ವ್ಯವಸ್ಥೆ ಮಾಡಿದೆ. ಕ್ವಿಂಟಾಲ್ ಗೆ 250 ರೂ.ದರವನ್ನು ನಿಗದಿಪಡಿಸಿ ರೈತರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. SCP, TSP ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿತು. ಈ ಯೋಜನೆಯನ್ನು ಕೇಂದ್ರವೂ ಜಾರಿಗೆ ತರಲು ಒತ್ತಾಯಿಸುತ್ತೇನೆ. 2022-23ರ ಬಿಜೆಪಿ ಅವಧಿಯಲ್ಲಿ ಕೇವಲ 1,10,627 ಕೋಟಿ ಒದಗಿಸಿತ್ತು. ಆದರೆ ನಮ್ಮ ಸರ್ಕಾರ 2023-24 ರಿಂದ ಇಲ್ಲಿಯವರೆಗೂ 1,17,197 ಕೋಟಿ ರೂ.ಗಳನ್ನು ಈ ಯೋಜನೆಯಡಿ ನೀಡಿದ್ದೇವೆ ಎಂದರು.
ಕೋವಿಡ್ ಬಂದಾಗ ಚಾಮರಾಜನಗರದಲ್ಲಿ ಆಕ್ಸಿಜನ್ ಕೊಟ್ಟು ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ? ಆಕ್ಸಿಜನ್ ಇಲ್ಲದೆ ರೋಗಿಗಳು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಾಗ ನಿಮ್ಮ ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ? ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಯುಪಿಎ ಅಧಿಕಾರಾವಧಿಯಲ್ಲಿ ಹತ್ತು ವರ್ಷಗಳಲ್ಲಿ 2003-04ರಿಂದ 2013-14ರವರೆಗೆ ಕೇಂದ್ರ ಬಜೆಟ್ ಗಾತ್ರ 95,21,493 ಕೋಟಿ ಆಗಿತ್ತು. ಎನ್ ಡಿ ಎ ಅಧಿಕಾರಾವಧಿಯಲ್ಲಿ 2014-15 ರಿಂದ ಇಲ್ಲಿಯವರೆಗೆ ಈ ಮೊತ್ತ 380,95,527 ಕೋಟಿಯಾಗಿದೆ ಎಂದು ತಿಳಿಸಿದರು.
ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1538.60 ಕೋಟಿ ರೂ. ಗಳನ್ನು ನೀಡಲಾಗಿದೆ. ಆದರೆ ಹಿಂದಿನ ಬಿಜೆಪಿ ಯಡಿಯೂರಪ್ಪನವರ ಸರ್ಕಾರ 472.80 ಕೋಟಿಗಳನ್ನು ನೀಡಿದ್ದರೆ, ಬಸವರಾಜ ಬೊಮ್ಮಾಯಿಯವರ ಸರ್ಕಾರ 883 ಕೋಟಿಗಳನ್ನು ನೀಡಿದೆ. ನಮ್ಮ ಸರ್ಕಾರ 1452000 ಮನೆಗಳನ್ನು ನಿರ್ಮಿಸಿದ್ದೇವೆ, ಬಿಜೆಪಿ ಅವಧಿಯಲ್ಲಿ ಕೇವಲ 5 ಲಕ್ಷ ಮನೆಗಳಾಗಿವೆ. ಈ ಎಲ್ಲ ಸತ್ಯಾಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು.
ನಾವು ಜನಪರವಾದ, ಸಮಾಜಮುಖಿಯಾದ ಆಡಳಿತವನ್ನು ನೀಡುತ್ತಿದ್ದು, ಕರ್ನಾಟಕದ ಅಭಿವೃದ್ಧಿ ಮಾದರಿ ಸರ್ಕಾರವಾಗಿದೆ. ಈ ಅಭಿವೃದ್ಧಿ ಮಾದರಿಯನ್ನು 21 ಕ್ಕಿಂತ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು, ಸರ್ಕಾರದ ಭಾಷಣವನ್ನು ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗುತ್ತಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.