ಸಂಗ್ರಹ ಚಿತ್ರ 
ರಾಜ್ಯ

SCP/TSP ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ: SC/ST ಸಚಿವರು-ಶಾಸಕರ ಗೌಪ್ಯ ಸಭೆ, 'ಕೈ' ಕಮಾಂಡ್‌ಗೆ ಪತ್ರ ಬರೆಯಲು ನಿರ್ಧಾರ

ಅನುದಾನವನ್ನು ನೇರವಾಗಿ ದಲಿತರು ಮತ್ತು ಆದಿವಾಸಿಗಳ ಸಬಲೀಕರಣಕ್ಕೆ ಬಳಸಬೇಕಾಗಿದ್ದು, ಇತರ ಯೋಜನೆಗಳಿಗೆ ವರ್ಗಾವಣೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ.

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಗೌಪ್ ಸಭೆ ನಡೆಸಿದ್ದು, ಸಭೆಯಲ್ಲಿ ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ವಿಧಾನಮಂಡಲ ಅಧಿವೇಶನ ಮುಕ್ತಾಯವಾಗಲಿರುವುದಕ್ಕೂ ಒಂದು ದಿನ ಮುನ್ನ ಈ ಸಭೆ ನಡೆದಿದ್ದು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಅವರ ಹಕ್ಕಿನ ಅನುದಾನ ಸಿಗುತ್ತಿಲ್ಲ. ಇದು ದೊಡ್ಡ ಮಟ್ಟದ ನಿರಾಸೆ ಮತ್ತು ಮೋಸ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಸಭೆಯಲ್ಲಿ ಪ್ರಮುಖವಾಗಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ–ಟಿಎಸ್‌ಪಿ ನಿಧಿಗಳನ್ನು ಬಳಸಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಬಂದಿತು.

ಈ ಅನುದಾನವನ್ನು ನೇರವಾಗಿ ದಲಿತರು ಮತ್ತು ಆದಿವಾಸಿಗಳ ಸಬಲೀಕರಣಕ್ಕೆ ಬಳಸಬೇಕಾಗಿದ್ದು, ಇತರ ಯೋಜನೆಗಳಿಗೆ ವರ್ಗಾವಣೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆಂದು ತಿಳಿದುಬಂದಿದೆ.

ಈ ವಿಷಯವನ್ನು ಕಾಂಗ್ರೆಸ್‌ ಎಂಎಲ್‌ಸಿ ಸುಧಾಮ ದಾಸ್ ಇತ್ತೀಚೆಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು. ಇದಕ್ಕೂ ಮುನ್ನ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ವಿಚಾರದ ಕುರಿತು ಧ್ವನಿ ಎತ್ತಿದ್ದರು ಎಂದು ತಿಳಿದುಬಂದಿದೆ. ಇದು ಪಕ್ಷದ ನಾಯಕತ್ವಕ್ಕೆ ಅಸಮಾಧಾನ ಉಂಟುಮಾಡಿತ್ತು ಎಂದು ತಿಳಿದುಬಂದಿದೆ.

ಸಭೆಯಲ್ಲಿ ಭಾಗವಹಿಸಿದ ನಾಯಕರು, ಈ ವಿಚಾರವನ್ನು ಇನ್ನಷ್ಟು ಗಂಭೀರವಾಗಿ ಮುಂದಕ್ಕೆ ಕೊಂಡೊಯ್ಯಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಉನ್ನತ ನಾಯಕತ್ವಕ್ಕೆ ಈ ಪತ್ರ ರವಾನಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಪತ್ರ ಸಿದ್ಧವಾಗಿದ್ದು, “ಎಸ್‌ಸಿಪಿ–ಟಿಎಸ್‌ಪಿ ನಿಧಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಂತಹ ಕ್ರಮಗಳು ದಲಿತರು ಹಾಗೂ ಆದಿವಾಸಿಗಳ ಸಬಲೀಕರಣದ ಉದ್ದೇಶಕ್ಕೆ ಧಕ್ಕೆ ತರುತ್ತದೆ ಮತ್ತು ಕರ್ನಾಟಕ ಎಸ್‌ಸಿ ಉಪಯೋಜನೆ ಹಾಗೂ ಎಸ್‌ಟಿ ಉಪಯೋಜನೆ ಕಾಯ್ದೆ–2013ರ ಆಶಯಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಏತನ್ಮಧ್ಯೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಒಬ್ಬ ಸಚಿವರು, ಈ ಹಿಂದೆ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಕಾಯ್ದೆಯ ಸೆಕ್ಷನ್ 7C ಅಡಿಯಲ್ಲಿ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೂ ಲಾಭವಾಗುವ ಯೋಜನೆಗಳಿಗೆ ಅನುಪಾತದಂತೆ ನಿಧಿ ಬಳಸಲು ಅವಕಾಶವಿದೆ ಎಂದು ಅವರು ಹೇಳಿದ್ದರು.

ಗ್ಯಾರಂಟಿ ಯೋಜನೆಗಳಲ್ಲಿಯೂ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಮಾತ್ರ ಈ ಹಣ ಬಳಸಲಾಗುತ್ತಿದೆ. ಯಾವುದೇ ದುರುಪಯೋಗವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಸಾಮಾಜಿಕ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೂಡ ಆಗಸ್ಟ್‌ 2025ರಲ್ಲಿ, ಸುಮಾರು ರೂ.13,500 ಕೋಟಿ ಎಸ್‌ಸಿಪಿ–ಟಿಎಸ್‌ಪಿ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಒಪ್ಪಿಕೊಂಡಿದ್ದರೂ, ಅದು ಸಂಪೂರ್ಣವಾಗಿ ಎಸ್‌ಸಿ/ಎಸ್‌ಟಿ ಸಮುದಾಯದ ಪ್ರಯೋಜನಕ್ಕಾಗಿ ಮಾತ್ರ” ಎಂದು ಸಮರ್ಥಿಸಿಕೊಂಡಿದ್ದರು.

ಈ ನಡುವೆ, ವಿರೋಧ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ್ದು, “ದಲಿತರು ಮತ್ತು ಆದಿವಾಸಿಗಳ ವಿರುದ್ಧ ವ್ಯವಸ್ಥಿತ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ರಷ್ಯಾ ಬಿಟ್ಟು ವೆನೆಜುವೆಲಾದಿಂದ ಭಾರತ ತೈಲ ಖರೀದಿಸಲಿದೆ" - ಟ್ರಂಪ್ ಹೇಳಿಕೆ ಬಗ್ಗೆ ರಷ್ಯಾ ಹೇಳಿದ್ದೇನು?

ವಿಬಿ-ಜಿ ರಾಮ್ ಜಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಆಂಥ್ರೊಪಿಕ್‌ನ ಹೊಸ AI ಟೂಲ್ ನಿಂದ ಭಾರತೀಯ ಐಟಿ ಷೇರುಗಳ ಕುಸಿತ

'ಜವಾಬ್ದಾರಿಯಿಂದ ಪ್ರಧಾನಿ ಮೋದಿ ನುಣುಚಿಕೊಂಡರು': ಸಂಸತ್ ಹೊರಗೆ ನರವಾಣೆ ಆತ್ಮಚರಿತ್ರೆ ಪ್ರದರ್ಶಿಸಿದ Rahul Gandhi; Video

ಮಾತು ನಿಲ್ಲಿಸಿದ್ದಕ್ಕೆ ಪ್ರೇಮಿಯನ್ನು ಇರಿದುಕೊಂದ ಮಹಿಳೆ!

SCROLL FOR NEXT