ಬೆಂಗಳೂರು: ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಫೋಟೋವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಶುಕ್ರವಾರ ಗೃಹ ಇಲಾಖೆ ಮತ್ತು ಪೊಲೀಸ್ ಮಹಾ ನಿರ್ದೇಶಕ ಎಂ ಎ ಸಲೀಮ್ ಅವರಿಗೆ ದೂರು ನೀಡಿದೆ.
ಬಿಜೆಪಿಯ 'ನುಂಗಪ್ಪ' ಜಾಹೀರಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಮಹಾತ್ಮ ಗಾಂಧಿಯವರು ಕೋಲಿನಿಂದ ಹೊಡೆಯಲು ಹೋಗುತ್ತಿರುವಂತೆ ತೋರಿಸಲಾಗಿದೆ.
ಈ ಜಾಹೀರಾತು ಇಂದು ಹಲವಾರು ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
"ಇಂದಿನ ಹಲವಾರು ದಿನ ಪತ್ರಿಕೆಗಳಲ್ಲಿ, ಅಂದರೆ 06-02-2026 ರಂದು ಪ್ರಕಟವಾದ ಜಾಹೀರಾತನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಲಾಗುತ್ತಿದೆ. ಅದರಲ್ಲಿ ಅಂತರರಾಷ್ಟ್ರೀಯವಾಗಿ ಗೌರವಿಸಲ್ಪಟ್ಟ ಅಹಿಂಸೆಯ ಸಂಕೇತವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತ್ರವನ್ನು ಹಿಂಸಾತ್ಮಕ ಕೃತ್ಯ/ ಹಿಂಸಾತ್ಮಕ ಸಂದೇಶ / ಹಿಂಸಾಚಾರಕ್ಕೆ ಪ್ರಚೋದನೆಗೆ ಸಂಬಂಧಿಸಿದಂತೆ ತಪ್ಪಾಗಿ ಮತ್ತು ಬೇಜವಾಬ್ದಾರಿಯಿಂದ ಬಳಸಲಾಗಿದೆ" ಎಂದು ಕಾಂಗ್ರೆಸ್ ಎಂಎಲ್ಸಿ ರಮೇಶ್ ಬಾಬು ದೂರಿನಲ್ಲಿ ತಿಳಿಸಿದ್ದಾರೆ.
ಅಂತಹ ದುರುಪಯೋಗವು ತೀವ್ರ ಆಕ್ರಮಣಕಾರಿಯಾಗಿದೆ, ಗಾಂಧಿಯವರ ಪರಂಪರೆಯನ್ನು ವಿರೂಪಗೊಳಿಸುತ್ತದೆ, ಸಾರ್ವಜನಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಮರಸ್ಯವನ್ನು ಭಂಗಗೊಳಿಸುವ ಸಾಮರ್ಥ್ಯವನ್ನು ಈ ಜಾಹೀರಾತು ಹೊಂದಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಈ ಜಾಹೀರಾತನ್ನು ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕ ಪ್ರಕಟಿಸಿದ್ದು, ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸಲು ಹಾಗೂ ಸಂಪೂರ್ಣ ತನಿಖೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಮೇಶ್ ಬಾಬು, ಪೊಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.