ಬೆಂಗಳೂರು: ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರನ್ಯಾಷನಲ್ ಲಿಮಿಟೆಡ್(ಎಂಎಸ್ಐಎಲ್) ಸಂಸ್ಥೆಯು ಸುಗಮ ಮತ್ತು ಪಾರದರ್ಶಕ ಚಿಟ್ ಫಂಡ್ ವ್ಯವಹಾರದ ಅನುಕೂಲಕ್ಕೆ ಅಭಿವೃದ್ಧಿ ಪಡಿಸಿರುವ ಸಾಫ್ಟವೇರ್ ಮತ್ತು ಮೊಬೈಲ್ ಆ್ಯಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ʻಎಂಎಸ್ಐಎಲ್ ಸರಕಾರಿ ಸಂಸ್ಥೆಯಾಗಿರುವುದರಿಂದ ಮೋಸದ ಪ್ರಶ್ನೆ ಬರುವುದಿಲ್ಲ. ಸಂಸ್ಥೆಯ ವಹಿವಾಟು ಈಗ ವರ್ಷಕ್ಕೆ 500 ಕೋಟಿ ರೂ.ಗಿಂತ ಕಡಿಮೆ ಇದೆ. ಆದರೆ ಇದನ್ನು ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ರೂ.ಗಳಿಗೆ ಏರಿಸುವ ಗುರಿ ಇದೆ. ಸಾರ್ವಜನಿಕರು ಖಾಸಗಿ ಚಿಟ್ ಗಳನ್ನು ನಂಬಿ ಮೋಸ ಹೋಗುವುದಕ್ಕಿಂತ ಇಲ್ಲಿ ಹಣ ಹಾಕುವುದು ಒಳ್ಳೆಯದುʼ ಎಂದರು.
ಪಕ್ಕದ ಕೇರಳದಲ್ಲಿ ಅಲ್ಲಿನ ಸರಕಾರಿ ಹಣಕಾಸು ಸಂಸ್ಥೆಯು ವರ್ಷಕ್ಕೆ ಚಿಟ್ ಸಹಿತ 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಆರ್ಥಿಕ ವಹಿವಾಟು ನಡೆಸುತ್ತಿದ್ದು, 45 ಲಕ್ಷ ಗ್ರಾಹಕರನ್ನು ಹೊಂದಿದೆ. ಅಲ್ಲಿನ ಚಿಟ್ ವ್ಯವಸ್ಥೆಯೊಂದರಲ್ಲೇ ವಾರ್ಷಿಕವಾಗಿ 47 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇದಕ್ಕಾಗಿ ಕೇರಳದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದವರನ್ನೇ ಎಂಎಸ್ಐಎಲ್ ಸಮಾಲೋಚಕರನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್ಐಎಲ್ ಸ್ಟೋರ್ ತೆರೆಯಲು ಚಿಂತನೆ
ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾತನಾಡಿ, 'ಸುಗಮ ಮತ್ತು ಪಾರದರ್ಶಕ ವ್ಯವಹಾರಕ್ಕೆಂದೇ ಎಂಎಸ್ಐಎಲ್ ಚಿಟ್ಸ್ ಸಾಫ್ಟವೇರ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಸಂಸ್ಥೆಯು ಈಗ 27 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ಇದನ್ನು ವಿಸ್ತರಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ಭಾಗ ಮತ್ತು ಮಹಿಳೆಯರ ಉಳಿತಾಯದ ಮೇಲೆ ನಮ್ಮ ಗಮನವಿದೆ. ನಮ್ಮಲ್ಲಿ ಬ್ಯಾಂಕುಗಳಲ್ಲಿ ಕೊಡುವುದಕ್ಕಿಂತ ಹೆಚ್ಚಿನ ಲಾಭ ಇದರ ಮೂಲಕ ಸಿಗಲಿದೆ ಎಂದಿದ್ದಾರೆ.
ಸುಗಮ ಚಿಟ್ ವ್ಯವಹಾರಕ್ಕಾಗಿ ಸಂಸ್ಥೆಯು ಏಜೆಂಟರನ್ನು ನೇಮಿಸಲಿದ್ದು, ಇದರಿಂದ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇಲ್ಲಿ ವಿಶೇಷ ಉಳಿತಾಯ ಸ್ಕೀಮುಗಳನ್ನು ತರಲಾಗುವುದು. ಇದರಲ್ಲಿ ಈ ಸಂಘಗಳ ಸಖಿಯರೇ ಏಜೆಂಟರಾಗಿ ನೇಮಕಗೊಳ್ಳಲಿದ್ದಾರೆ. ಇವರಲ್ಲದೆ, ಹೋಟೆಲ್, ಕಿರಾಣಿ ಅಂಗಡಿಗಳನ್ನೂ ಏಜೆಂಟ್ ರೀತಿ ಕಾರ್ಯನಿರ್ವಹಿಸಲು ವ್ಯವಸ್ಥೆ ರೂಪಿಸಲಾಗುವುದು. ಸರ್ಕಾರಿ ನೌಕರರ ಹೂಡಿಕೆಗೆ ಆದ್ಯತೆ ನೀಡಲಾಗುವುದು. ಒಟ್ಟಿನಲ್ಲಿ ಮನೆ ಮನೆಗೂ ಎಂಎಸ್ಐಎಲ್ ಚಿಟ್ ತಲುಪಲಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯಲಿದೆ ಎಂದು ಅವರು ಹೇಳಿದರು.
ಚಿಟ್ ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಕಂತನ್ನು ಆ್ಯಪ್ ಮೂಲಕ ಯುಪಿಐ ಪಾವತಿ, ವೆಬ್ಸೈಟ್ ಮೂಲಕ ಪಾವತಿ, ಆನ್ಲೈನ್ ಮೂಲಕವೇ ಪಾವತಿಸಬಹುದು. ಅಷ್ಟೇ ಅಲ್ಲದೆ ಅನ್ ಲೈನ್ ಮೂಲಕ ಬಿಡ್ನಲ್ಲಿಯೂ ಭಾಗವಹಿಸುವ ಪ್ರಯೋಜನಗಳಿವೆ ಎಂದು ಅವರು ತಿಳಿಸಿದ್ದಾರೆ.
ಸರಕಾರಿ ನೌಕರರಿಗೆ ಎಲ್ಲ ವಸ್ತುಗಳೂ ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡುವ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್ಐಎಲ್ ಸ್ಟೋರ್ ತೆರೆಯುವ ಚಿಂತನೆ ಇದೆ. ಇದರ ಸಾಧಕಬಾಧಕಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಇದು ಕೈಗೂಡಿದರೆ 20 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಪಾಟೀಲ ತಿಳಿಸಿದರು.
ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗ ಶೆಟ್ಟಿ ಮಾತನಾಡಿ, ಸಂಸ್ಥೆಯು 2024-25ರಲ್ಲಿ 3,882 ಕೋಟಿ ರೂ. ವಹಿವಾಟು ನಡೆಸಿ, 122 ಕೋಟಿ ರೂ.ಗಿಂತಲೂ ಹೆಚ್ಚು ಲಾಭ ದಾಖಲಿಸಿದೆ. ಸಂಸ್ಥೆಯ ಬಲವರ್ಧನೆಗೆ ವಿಷನ್-2030 ಎನ್ನುವ ನೀಲನಕ್ಷೆ ಸಿದ್ಧಪಡಿಸಿದ್ದು, ಸಿಎಸ್ಆರ್ ಉಪಕ್ರಮದಡಿ ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸಗಳಿಗೆ ಹಣ ಕೊಡಲಾಗುತ್ತಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹ ಇದ್ದರು.