ಬೆಂಗಳೂರು: ಮಂಗಳೂರು–ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ–ಮಂಗಳೂರು ಮಾರ್ಗದ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿದ್ದು, ಪ್ರಸ್ತುತ ಪರೀಕ್ಷೆ ಮತ್ತು ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವೇಳಾಪಟ್ಟಿ ತಯಾರಿಸಿ ಕರಾವಳಿ ಕರ್ನಾಟಕದ ಕಾರವಾರವರೆಗೆ ವಂದೇ ಭಾರತ್ ಸೇವೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಬೆಂಗಳೂರು–ಮುಂಬೈ ನಡುವೆ ಪ್ರೀಮಿಯಂ ರೈಲು ಸೇವೆ ಶೀಘ್ರ ಆರಂಭವಾಗಲಿದ್ದು, ಪುಣೆ–ಬೆಂಗಳೂರು ರೈಲು ಕಾರಿಡಾರ್ ಕುರಿತ ಮನವಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಕರಾವಳಿ ಪ್ರದೇಶಕ್ಕೆ ಎರಡು ವಂದೇ ಭಾರತ್ ರೈಲುಗಳನ್ನು ನಿಯೋಜಿಸಲಾಗುವುದು. ಒಂದನ್ನು ಕರಾವಳಿಯಿಂದ ಬೆಂಗಳೂರು ಕಡೆಗೆ ಹಾಗೂ ಮತ್ತೊಂದನ್ನು ಬೆಂಗಳೂರಿನಿಂದ ಕರಾವಳಿ ಕಡೆಗೆ ಚಲಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಈಗಾಗಲೇ 12 ಜೋಡಿ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. “ಭವಿಷ್ಯದಲ್ಲಿ ಸಂಪೂರ್ಣ ರಾಜ್ಯದಲ್ಲಿ ವಂದೇ ಭಾರತ್ ರೈಲು ಸೇವೆ ಒದಗಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹೈ ಸ್ಪೀಡ್ ರೈಲು ಯೋಜನೆ ಕುರಿತು ಮಾತನಾಡಿ, ಬೆಂಗಳೂರು–ಚೆನ್ನೈ ಪ್ರಯಾಣ ಸಮಯ 73 ನಿಮಿಷ, ಬೆಂಗಳೂರು–ಹೈದರಾಬಾದ್ 2 ಗಂಟೆ ಆಗಲಿದೆ ಎಂದು ಹೇಳಿದರು.
ದಕ್ಷಿಣ ಭಾರತದ ನಗರಗಳನ್ನು ಸಂಪರ್ಕಿಸುವ ಹೈ ಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆಗೂ ಸರ್ಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಬೆಂಗಳೂರು ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್ಗಳಲ್ಲೂ ಕಾಮಗಾರಿ ವೇಗ ಪಡೆದಿದ್ದು, ವಿನ್ಯಾಸ ಮತ್ತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅರ್ಧಕ್ಕಿಂತ ಹೆಚ್ಚು ಮಾರ್ಗ ಎಲಿವೇಟೆಡ್ ಆಗಿರುವುದರಿಂದ ವಿಶೇಷ ವಿನ್ಯಾಸದ ಅಗತ್ಯವಿದೆ ಎಂದು ಹೇಳಿದರು.