ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಪ್ರಕಟವಾದ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಗಾಂಧಿ ಸ್ಮಾರಕ ನಿಧಿ ಖಂಡಿಸಿದೆ. ಇದು ರಾಷ್ಟ್ರಪಿತನ ಮೂಲ ಆದರ್ಶಗಳಿಗೆ ಮಾಡಿದ ಅವಮಾನವಾಗಿದ್ದು, ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ ಎಂದು ಹೇಳಿದೆ. ಗಾಂಧಿಯವರ ಕಾರ್ಟೂನ್ ಬಳಸಿ ಜಾಹೀರಾತಿನ ಮೂಲಕ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ತೀವ್ರ ಜಟಾಪಟಿ ನಡೆಸಿವೆ.
ರಾಜ್ಯ ಸರ್ಕಾರದಿಂದಲೇ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಫೆಬ್ರವರಿ 3 ರಂದು ಪ್ರಮುಖ ದೇಶೀಯ ಮತ್ತು ಇಂಗ್ಲಿಷ್ ಮುಖಪುಟದ ಜಾಹೀರಾತಿನಲ್ಲಿ ಸಂಗಪ್ಪ ಎಂಬ ವ್ಯಕ್ತಿಯೊಂದಿಗೆ ಗಾಂಧಿ ಸಂಭಾಷಣೆ ನಡೆಸುತ್ತಿರುವ ವ್ಯಂಗ್ಯಚಿತ್ರಗಳಿವೆ. ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿರುವುದನ್ನು ಚಿತ್ರಿಸಲಾಗಿದೆ. ಇದು ಆರ್ ಎಸ್ ಎಸ್ ಸಮವಸ್ತ್ರ ಹೋಲುತ್ತದೆ ಎಂದು ಬಿಜೆಪಿ ಹೇಳಿದೆ.
ಇದಕ್ಕೆ ಪ್ರತಿಯಾಗಿ ಫೆಬ್ರವರಿ 7 ರಂದು ಬಿಜೆಪಿ ಸಂಪೂರ್ಣ ಪುಟದ ಜಾಹೀರಾತು ನೀಡಿದ್ದು, ಅದರಲ್ಲಿ ಗಾಂಧೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೊಣ್ಣೆಯಿಂದ ಹೊಡೆಯುತ್ತಿರುವಂತೆ ತೋರಿಸಲಾಗಿದೆ. ಅಲ್ಲದೇ ಅವರೆಲ್ಲರನ್ನೂ ನುಂಗಪ್ಪ ಎಂದು ಕರೆಯಲಾಗಿದೆ. ಈ ಜಾಹೀರಾತಿನಲ್ಲಿ ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು ಎಂದು ಶೀರ್ಷಿಕೆ ನೀಡಲಾಗಿದೆ.
“ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಹಾಗೂ ಎಲ್ಲಾ ನುಂಗಪ್ಪಗಳಿರ , ನನ್ನ ಹೆಸರಲ್ಲಿ 60 ವರ್ಷ ಲೂಟಿ ಮಾಡಿದ್ದಲ್ಲದೇ, ನನ್ನ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ - ಜಿ ರಾಮ್ ಜಿ ಯೋಜನೆ ಕುರಿತಾಗಿ ಅಪಪ್ರಚಾರ ಮಾಡ್ತೀರಾ” ಎಂದು ದೊಣ್ಣೆ ಎತ್ತಿ ಹಿಡಿದ ಹಾಗೆ ಚಿತ್ರಿಸಲಾಗಿದೆ.
ಈ ಜಾಹೀರಾತು ಜಟಾಪಟಿ ಕುರಿತು ರಾಜ್ಯ ಗಾಂಧಿ ಸ್ಮಾರಕ ನಿಧಿ (Kgsn) ಅಧ್ಯಕ್ಷ ವುಡೆ ಪಿ ಕೃಷ್ಣ ಮತ್ತು ಗೌರವ ಕಾರ್ಯದರ್ಶಿ ಎಂ ಸಿ ನರೇಂದ್ರ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಇದು ಅವರ ತತ್ವ ಆದರ್ಶಕ್ಕೆ ಮಾಡಿದ ಅವಹೇಳನಕಾರಿಯಾಗಿದೆ. ಇಂತಹ ಜಾಹೀರಾತುಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತವೆ ಮತ್ತು ಅವರ ಪರಂಪರೆಗೆ ಸಂಬಂಧಿಸಿದ ಪಾವಿತ್ರ್ಯವನ್ನು ಹಾಳುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರವಿದ್ದು, ಗಾಂಧೀಜಿಯವರ ತತ್ತ್ವ ಆದರ್ಶಗಳನ್ನು ಅರ್ಥಮಾಡಿಕೊಂಡವರಿಗೆ ಆಘಾತವಾಗುವಂತಹ ರೀತಿಯಲ್ಲಿ ಪ್ರಕಟವಾಗಿದೆ. ಅವರನ್ನು ತೋರಿಸಿರುವ ರೀತಿ ಇಡೀ ರಾಷ್ಟ್ರಕ್ಕೆ ನಾಚಿಕೆ ತರುವಂತಹದ್ದು ಮತ್ತು ಅವರ ಮೂಲ ಆದರ್ಶಗಳಾದ ಅಹಿಂಸೆ, ಸತ್ಯಾಗ್ರಹ ಮತ್ತು ಸರ್ವೋದಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಭಾವಚಿತ್ರವು ಗಾಂಧೀಜಿಯವರ ಮೌಲ್ಯಗಳ ನಾಶಕ್ಕೆ ಸಮಾನವಾಗಿದೆ ಎಂದು ಗಾಂಧಿ ಸ್ಮಾರಕ ನಿಧಿ ಹೇಳಿದೆ.
ತ್ತೀಚಿನ ದಿನಗಳಲ್ಲಿ ಪಕ್ಷಪಾತ ಅಥವಾ ರಾಜಕೀಯ ಅನುಕೂಲಕ್ಕಾಗಿ ಗಾಂಧಿಯವರ ಭಾವಚಿತ್ರ ಬಳಸುವ ಪ್ರವೃತ್ತಿ ಗೊಂದಲದ ಬೆಳವಣಿಗೆಯಾಗಿದೆ. ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ತನ್ನ ರಾಷ್ಟ್ರೀಯ ಕರ್ತವ್ಯವನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದೆ.