ಗದಗ: ಕರ್ನಾಟಕದ ಗದಗ ಜಿಲ್ಲೆಯ ಕಪ್ಪತಗುಡ್ಡ ಪರ್ವತ ಶ್ರೇಣಿ ಪ್ರದೇಶದಲ್ಲಿ ಚಿನ್ನ ಮಾತ್ರವಲ್ಲ, ವಜ್ರ ಹಾಗೂ ಇತರ ಅಮೂಲ್ಯ ಖನಿಜಗಳ ಭಂಡಾರಗಳು ಇರುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಬೆನ್ನಲ್ಲೇ ಕರ್ನಾಟಕದ ವಿವಿಧ ಭಾಗಗಳಿಂದ ಭೂವಿಜ್ಞಾನಿಗಳು ಗದಗ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ವೇಳೆ ಕಪ್ಪತಗುಡ್ಡ ಪ್ರದೇಶದ ಭೌಗೋಳಿಕ ರಚನೆ ಅತ್ಯಂತ ವಿಶಿಷ್ಟವಾಗಿದ್ದು, ವಜ್ರ ಭಂಡಾರಗಳಿರುವ ಸಾಧ್ಯತೆಗಳೂ ಇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರದೇಶ ದಕ್ಷಿಣ ಭಾರತದ ಪ್ರಸಿದ್ಧ ಪ್ರಿಕ್ಯಾಂಬ್ರಿಯನ್ ಶಿಲಾರಚನೆಯ ಭಾಗವಾಗಿದ್ದು, ಇಂತಹ ಪ್ರಾಚೀನ ಶಿಲಾರಚನೆ ಪ್ರದೇಶಗಳಲ್ಲಿ ವಜ್ರಗಳೂ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ ಭೂವಿಜ್ಞಾನಿಗಳು ತಿಳಿಸಿದ್ದಾರೆ.
ಹಿಂದಿನ ಅಧ್ಯಯನಗಳು ಮುಖ್ಯವಾಗಿ ಚಿನ್ನದ ಸಂಶೋಧನೆಗೆ ಸೀಮಿತವಾಗಿದ್ದರೂ, ಇತ್ತೀಚಿನ ಸಮೀಕ್ಷೆಗಳು ವಜ್ರ, ಕಬ್ಬಿಣ ಮತ್ತು ಮ್ಯಾಂಗನೀಸ್ ಸೇರಿದಂತೆ ಇತರ ಅಮೂಲ್ಯ ಖನಿಜಗಳ ಭಂಡಾರಗಳು ಇರುವ ಸಾಧ್ಯತೆಗಳಿರುವ ಸೂಚನೆಗಳನ್ನು ನೀಡುತ್ತಿವೆ.
ಗದಗ ಬಳಿಯ ಹೊಸೂರಿನ ಗ್ರಾಮಸ್ಥರೊಬ್ಬರು ಮಾತನಾಡಿ, ನಮ್ಮ ಹಳ್ಳಿಗಳಲ್ಲಿ ಚಿನ್ನ ಮತ್ತು ವಜ್ರದ ಗಣಿಗಳು ಇವೆ ಎಂದು ನಮ್ಮ ತಂದೆ ಮತ್ತು ಚಿಕ್ಕಪ್ಪಂದಿರು ಹೇಳಿದ್ದನ್ನು ಕೇಳಿದ್ದೇವೆ. 1960 ರವರೆಗೆ ವಜ್ರ ಗಣಿಗಾರಿಕೆ ಇತ್ತು. ನಂತರ ಏಕೆ ನಿಂತಿಹೋಯಿತು ಎಂಬುದು ಗೊತ್ತಿಲ್ಲ. ಬ್ರಿಟಿಷ್ ಸರ್ಕಾರವು ಇಲ್ಲಿಂದ ಎಲ್ಲಾ ಚಿನ್ನ ಮತ್ತು ವಜ್ರಗಳನ್ನು ತೆಗೆದುಕೊಂಡು ಹೋಗಿರಬಹುದು ಎಂದು ಹೇಳಿದ್ದಾರೆ.
ಕೊಪ್ಪಳದ ಭೂವಿಜ್ಞಾನಿ ಚಂದ್ರಕಾಂತ್ ಕೆ ಅವರು ಮಾತನಾಡಿ, ಕೇಂಬ್ರಿಯನ್ ಯುಗದಲ್ಲಿ ಜೀವಿಗಳ ವೈವಿಧ್ಯತೆ ಮತ್ತು ಸಂಕೀರ್ಣತೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಿತು, ಈ ಯುಗದಲ್ಲಿ, ಖಂಡಗಳು ರೂಪುಗೊಂಡು ಆಧುನಿಕ ವಾತಾವರಣವು ಅಭಿವೃದ್ಧಿಗೊಂಡಿತು, ಹುಳುಗಳು ಮತ್ತು ಜೆಲ್ಲಿ ಮೀನುಗಳಂತಹ ಮೃದು ದೇಹದ ಜೀವಿಗಳು ಸಾಗರಗಳಲ್ಲಿ ವಾಸಿಸತೊಡಗಿದವು. ಆದರೆ, ಭೂಮಿ ಮಾತ್ರ ಬಂಜರಾಗಿಯೇ ಇತ್ತು.
ಪತ್ತೆಯಾಗಿರುವ ಚಿನ್ನದ ನಿಧಿ ಬಂಡೆಗಳಂತೆ ಪ್ರಾಚೀನ ರೂಪಾಂತರ ಶಿಲೆಗಳಂತೆ ಕಾಣುತ್ತವೆ. ಇದರ ಬಗ್ಗೆ ಸಮೀಕ್ಷೆ ನಡೆಸಬೇಕು. ಈ ಪ್ರದೇಶದ ಶಿಲಾರಚನೆಗಳು ಅತ್ಯಂತ ಪ್ರಾಚೀನ ಮೆಟಾಮಾರ್ಫಿಕ್ ಶಿಲೆಗಳಂತೆ ಕಾಣುತ್ತಿದ್ದು, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವಜ್ರ ಮತ್ತು ಇತರ ಅಮೂಲ್ಯ ಲೋಹಗಳ ಕುರಿತು ಸಮೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ನಿರ್ದೇಶಕ ನಾಗ್ ಭೂಷಣ್ ಅವರು ಮಾತನಾಡಿ, ಈ ಪ್ರದೇಶದ ಶಿಲಾರಚನೆಗಳು ಲಕ್ಷಾಂತರ ವರ್ಷಗಳ ಹಿಂದಿನವುಗಳಾಗಿದ್ದು, ಭೂಗರ್ಭದಲ್ಲಿ ಅನೇಕ ರಾಸಾಯನಿಕ ಪ್ರಕ್ರಿಯೆಗಳು ನಡೆದಿರಬಹುದು. ವಜ್ರ ಮತ್ತು ಇನ್ನೂ ಅನೇಕ ಅಮೂಲ್ಯ ಲೋಹಗಳಿರುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.