ಬಳ್ಳಾರಿ: ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಉತ್ಪನನ ಹಾಗೂ ಶೋಧನಾ ಕಾರ್ಯದಲ್ಲಿ ಎರಡು ಪುರಾತನ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ.
ಅಮೆರಿಕಾದ ಹಾರ್ಟ್ವಿಕ್ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಯೋಜನೆಯ ಸಹ ನಿರ್ದೇಶಕಿ ಡಾ. ನಮಿತಾ ಎಸ್ ಸುಗಂಧಿ ನೇತೃತ್ವದ ತಂಡ ಈ ಉತ್ಖನನ ಕಾರ್ಯ ನಡೆಸುತ್ತಿದೆ.
ಕಳೆದ ವಾರ ಮಣ್ಣಿನೊಳಗೆ ಮಾನವ ಎಲುಬುಗಳು ಕಂಡುಬಂದಿದ್ದು, ನಂತರ ಶೋಧ ಕಾರ್ಯ ಮುಂದುವರೆಸಲಾಗಿತ್ತು. ಇದೀಗ ಎರಡು ಸಂಪೂರ್ಣ ಅಸ್ಥಿಪಂಜರಗಳು ಪತ್ತೆಯಾಗಿವೆ. ಪ್ರತಿ ಅಸ್ಥಿಪಂಜರವು ಸುಮಾರು 5.5 ಅಡಿ ಉದ್ದ ಹೊಂದಿದ್ದು, ಒಂದರ ಪಕ್ಕದಲ್ಲಿ ಮತ್ತೊಂದು ಇರಿಸಿರುವ ಸ್ಥಿತಿಯಲ್ಲಿ ಕಂಡುಬಂದಿವೆ.
ಅಸ್ಥಿಪಂಜರಗಳು ಉತ್ತಮ ಸ್ಥಿತಿಯಲ್ಲಿ ಕಂಡುಬಂದಿರುವುದು ಗಮನಾರ್ಹ ವಿಚಾರವಾಗಿದೆ. ಮೃತದೇಹಗಳ ಮೇಲೆ ಕಲ್ಲುಗಳನ್ನು ಇಡುವ ಪದ್ಧತಿಗೆ ಇದು ಸಾಕ್ಷ್ಯವಾಗಿ ಕಂಡುಬಂದಿದೆ. ಇದು ಹಿಂದಿನ ಕಾಲದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಅಸ್ಥಿಪಂಜರಗಳ ಸುತ್ತಮುತ್ತ ಪಾತ್ರೆಗಳ ತುಂಡುಗಳು, ಮೈಕ್ರೊಲಿಥಿಕ್ ಉಪಕರಣಗಳು ಹಾಗೂ ಪ್ರಾಚೀನ ಮಾನವ ಉಪಕರಣ ಬಳಕೆಯ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ತೆಕ್ಕಲಕೋಟೆ ಪ್ರದೇಶವು ಪುರಾತನ ಕಾಲದಲ್ಲಿ ಪ್ರಮುಖ ಮಾನವ ವಾಸಸ್ಥಳವಾಗಿತ್ತು ಎಂಬುದಕ್ಕೆ ಬಲವಾದ ಸೂಚನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಇನ್ನು ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷ ಹಳೆಯದಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದು, ನಿಖರ ಕಾಲ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಹಾಗೂ ಉತ್ಖನನ ಕಾರ್ಯದ ನಿರ್ದೇಶಕ ಆರ್. ಶಾಜೇಶ್ವರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಇಂತಹ ಅಪರೂಪದ ಪುರಾತತ್ವ ಸ್ಥಳವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಹೇಳಿದರು.
ಡಾ. ಸುಗಂಧಿ ಅವರು 2019ರಲ್ಲಿ ಮೊದಲ ಬಾರಿ ತೆಕ್ಕಲಕೋಟೆಗೆ ಭೇಟಿ ನೀಡಿ ಉತ್ಖನನ ಕಾರ್ಯ ಆರಂಭಿಸಿದ್ದರು. 2025ರಲ್ಲಿ ಎರಡನೇ ಬಾರಿ ಭೇಟಿ ನೀಡಿ ‘ಮ್ಯಾನ್ ಅಂಡ್ ಎನ್ವಿರಾನ್ಮೆಂಟ್ ತೆಕ್ಕಲಕೋಟೆ’ ಎಂಬ ಅಧ್ಯಯನವನ್ನು ಮಂಡಿಸಿದ್ದರು. ಇದೀಗ ಮೂರನೇ ಬಾರಿ ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ.
1964ರಲ್ಲಿ ಖ್ಯಾತ ಪುರಾತತ್ವ ತಜ್ಞ ಎಂ.ಎಸ್. ನಾಗರಾಜ ರಾವ್ ಅವರು ಇಲ್ಲಿ ಉತ್ಖನನ ಕಾರ್ಯ ನಡೆಸಿ ಈ ಪ್ರದೇಶದ ಪುರಾತತ್ವ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದರು. ಇದೇ ಡಾ. ಸುಗಂಧಿ ಅವರಿಗೆ ಪ್ರೇರಣೆಯಾಗಿದ್ದು, ಅಧ್ಯಯನಕ್ಕಾಗಿ ತೆಕ್ಕಲಕೋಟೆಯನ್ನು ಆಯ್ಕೆ ಮಾಡಲು ಕಾರಣವಾಗಿದೆ.