'ನಂದಿನಿ' ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯನ್ನಾಗಿ ಹಿರಿಯ ನಟಿ ಸುಧಾರಾಣಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮಾಹಿತಿ ನೀಡಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಪ್ರಮುಖ ಭಾಗವಾದ ಬೆಂಗಳೂರು ಹಾಲು ಒಕ್ಕೂಟ ನಟಿ ಸುಧಾರಾಣಿ ಅವರನ್ನು ನಂದಿನಿ ಉತ್ಪನ್ನಗಳ ನೂತನ ಪ್ರಚಾರದ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ಡಿಕೆ ಸುರೇಶ್ ಬರೆದುಕೊಂಡಿದ್ದಾರೆ. ಮತ್ತೊಂಡೆದೆ, ಮೈಸೂರು ಸ್ಯಾಂಡಲ್ ಸೋಪ್ ತಯಾರಕರಾದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅಧಿಕೃತವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಸ್ಯಾಂಡಲ್ ಸೋಪ್ ಸೇರಿದಂತೆ ಕಂಪನಿಯ 57 ಉತ್ಪನ್ನಗಳನ್ನು ಅನಾವರಣಗೊಳಿಸಿದರು. ಇನ್ನು ಸ್ಯಾಂಡಲ್ವುಡ್ ಸೋಪ್ ಗೆ ಮುಂಬೈ ಮೂಲದ ಪರಭಾಷೆಯ ನಟಿಯನ್ನು ಆಯ್ಕೆ ಮಾಡಿದ್ದಕ್ಕೆ ಪ್ರತಿಪಕ್ಷಗಳು ಸೇರಿದಂತೆ ಕೆಲವರು ಸರ್ಕಾರವನ್ನು ಈ ಹಿಂದೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲಾ ಬಸ್ ಹರಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಬೆಂಗಳೂರಿನ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ. ಮೃತ ಮಕ್ಕಳನ್ನು 2 ವರ್ಷದ ವರ್ಷಾ ಹಾಗೂ 4 ವರ್ಷದ ಭಾನು ಎಂದು ಗುರುತಿಸಲಾಗಿದೆ. ಹಾಲು ತರಲು ಮಕ್ಕಳನ್ನು ಕರೆದುಕೊಂಡು ಪೊಲೀಸ್ ಪೇದೆ ನಾಗನಗೌಡ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಶಾಲಾ ಬಸ್ ಯೂಟರ್ನ್ ತೆಗೆದುಕೊಳ್ಳುವಾಗ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಿಂದ ಕೆಳಗೆ ಬಿದ್ದ ಇಬ್ಬರು ಮಕ್ಕಳ ಮೇಲೆ ಬಸ್ ಹಿಂಬದಿ ಚಕ್ರ ಹರಿದಿದೆ. ಕೂಡಲೇ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮುಡಾ 50:50 ನಿವೇಶನ ಹಂಚಿಕೆ ಹಗರಣ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದ 134 ಪ್ರಕರಣಗಳಿಗೆ ತನಿಖೆಯನ್ನು ಲೋಕಾಯುಕ್ತ ಪುನರಾರಂಭಿಸಿದ್ದು, ಸೈಟ್ ಪಡೆದ 40ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಜಾರಿ ಮಾಡಿದೆ. 1,055 ಸೈಟ್ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಸೈಟ್ ಹಂಚಿಕೆಯಲ್ಲಿ ಕಾನೂನು ಉಲ್ಲಂಘನೆ ಮತ್ತು ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದನ್ನು ಲೋಕಾಯುಕ್ತ ಪರಿಶೀಲಿಸುತ್ತಿದೆ. ಮುಡಾದ ಮಾಜಿ ಆಯುಕ್ತರಾದ ದಿನೇಶ್, ನಟೇಶ್ ಸೇರಿದಂತೆ ಹಲವು ಅಧಿಕಾರಿಗಳು, ಇತರರಿಗೆ ನೋಟಿಸ್ ಜಾರಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು BWSSB ಮಹತ್ವದ ಕ್ರಮಕೈಗೊಂಡಿದ್ದು, ಅದರಂತೆ ಬೇಸಿಗೆಗೂ ಮುನ್ನ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಿನಿ ವಾಟರ್ ಟ್ಯಾಂಕ್ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಬೆಂಗಳೂರಿನ ನೀರಿನ ಬೇಡಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ಸಂಭಾವ್ಯ ಕೊರತೆಯನ್ನು ಪರಿಹರಿಸಲು BWSSB ಸಿದ್ಧತೆಗಳನ್ನು ಹೆಚ್ಚಿಸಿದೆ. ಬೇಸಿಗೆಯ ಸಿದ್ಧತೆಯನ್ನು ನಿರ್ಣಯಿಸಲು ಹಿರಿಯ ಅಧಿಕಾರಿಗಳೊಂದಿಗೆ BWSSB ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಮಂಡಳಿಯು ಈಗಾಗಲೇ ಹಲವು ಪ್ರದೇಶಗಳನ್ನು ಗುರುತಿಸಿದೆ. ನೀರಿನ ಸಮಸ್ಯೆ ತಗ್ಗಿಸಲು ಮತ್ತು ನಿವಾಸಿಗಳಿಗೆ ಕುಡಿಯುವ ನೀರಿನ ಉಚಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, ಗುರುತಿಸಲಾದ ಸ್ಥಳಗಳಲ್ಲಿ ಮಿನಿ ವಾಟರ್ ಟ್ಯಾಂಕ್ಗಳನ್ನು ಸ್ಥಾಪಿಸಲು ಮಂಡಳಿ ನಿರ್ಧರಿಸಿದೆ ಎಂದರು.
ಯಶ್ ನಟನೆಯ Toxic ಚಿತ್ರದ ಟೀಸರ್ ಕುರಿತಂತೆ ಟೀಕೆಗಳು ಕೇಳಿಬಂದಿತ್ತು. ಅಲ್ಲದೆ ಮಹಿಳಾ ಆಯೋಗಕ್ಕೆ, ಸೆನ್ಸಾರ್ ಮಂಡಳಿಗೆ ದೂರುಗಳು ದಾಖಲಾಗಿದ್ದವು. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಟಾಕ್ಸಿಕ್ ಸಿನಿಮಾದ ವಿರುದ್ಧ ಆರೋಪ ಮಾಡಿದ್ದು, ದೇವದೂತ ಸಂತ ಮಿಕಯೇಲ್ ಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದೆ. ಇದರ ಮಧ್ಯೆ ಫಿಲಂ ಚೇಂಬರ್ನ ನೂತನ ಅಧ್ಯಕ್ಷೆ ಜಯಮಾಲ ಅವರು ಮಾತನಾಡಿದ್ದು ಟಾಕ್ಸಿಕ್ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಟೀಸರ್ ನೋಡಿ ಇಡೀ ಸಿನಿಮಾ ಇದೇ ರೀತಿ ಇರಲಿದೆ ಎಂದು ಮುಂಚಿತವಾಗಿ ನಿರ್ಧರಿಸುವುದು ತಪ್ಪು. ನಿಮಗೆ ಪ್ರತಿಭಟನೆ ಮಾಡುವ ಮನಸ್ಸಿದ್ದರೆ ಸಿನಿಮಾ ನೋಡಿ ಪ್ರತಿಭಟನೆ ಮಾಡಿ. ಕನ್ನಡ ಚಿತ್ರರಂಗ ಪ್ರಾರಂಭವಾಗಿ 93 ವರ್ಷಗಳಾಯ್ತು, ಈವರೆಗೆ ಒಮ್ಮೆಯೂ ಸಹ ಇತರ ಧರ್ಮಕ್ಕೆ ಅವಹೇಳನ ಮಾಡಿಲ್ಲ, ಸರ್ವಧರ್ಮ ಸಹಿಷ್ಣುವಾಗಿ ಚಿತ್ರರಂಗ ನಡೆದುಕೊಂಡು ಬಂದಿದೆ. ಈಗ ಒಂದು ಟೀಸರ್ ನೋಡಿ ಸಿನಿಮಾ ಬಗ್ಗೆ, ಚಿತ್ರರಂಗದ ಬಗ್ಗೆ ಆರೋಪ ಮಾಡುವುದು ತಪ್ಪು ಎಂದು ಹೇಳಿದರು.