ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಾಲ್ವರು ಅಧಿಕಾರಿಗಳಿಗೆ ಸೇರಿದ 29 ಸ್ಥಳಗಳ ಮೇಲೆ ನಡೆಸಿದ ಕಾರ್ಯಾಚರಣೆಯಲ್ಲಿ 23.75 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸೂಪರಿಂಟೆಂಡ್ ಎಂಜಿನಿಯರ್ ಎಚ್.ಎಂ.ಜನಾರ್ದನ ಅವರ ಆಪ್ತರ ಮನೆಯಲ್ಲಿ ₹1.70 ಕೋಟಿ ನಗದು ಸೇರಿ ಒಟ್ಟು ₹19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ರಾಜ್ಯದ ವಿವಿಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ದೂರುಗಳ ಆಧಾರದಲ್ಲಿ ಒಟ್ಟು 29 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿತ್ತು. ದಾಳಿ ವೇಳೆ ಆರೋಪಿತ ಅಧಿಕಾರಿಗಳು ಸಂಪಾದನೆ ಮಾಡಿಟ್ಟಿದ್ದ ಖಜಾನೆ ಬಯಲಾಗಿದ್ದು, ಕೋಟಿಗಟ್ಟಲೆ ನಗದು, ಕೆ.ಜಿ.ಗಟ್ಟಲೆ ಆಭರಣ ಸೇರಿ 21 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ, ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ ಅವರ ಬಳಿ 11.29 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಪತ್ತೆಯಾಗಿದೆ.
ಹಲವಾರು ಆಸ್ತಿಗಳು ಮತ್ತು ಎರಡು ಶಿಕ್ಷಣ ಸಂಸ್ಥೆಗಳು, 11 ಎಕರೆ ಕೃಷಿ ಭೂಮಿ, 44.23 ಲಕ್ಷ ರೂಪಾಯಿ ನಗದು, 60.79 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 27 ಲಕ್ಷ ರೂಪಾಯಿಗಳ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಚ್ ಎಂ ಜನಾರ್ದನ ಅವರು 4.42 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ - ಒಂದು ನಿವೇಶನ, ಮೂರು ಮನೆಗಳು, 34 ಎಕರೆ ಕೃಷಿ ಭೂಮಿ, 7 ಲಕ್ಷ ರೂಪಾಯಿಗಳ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ 1.70 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ.
ದಾವಣಗೆರೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರ್ಜುನ್ ಆರ್ ಎಚ್ (ಸಿವಿಲ್) 2.18 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದಾರೆ.
ಧಾರವಾಡದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಸರ್ವೆ ಮೇಲ್ವಿಚಾರಕ ಸೋಮಲಿಂಗಪ್ಪ ಪಕ್ಕೀರಪ್ಪ ಸಿದ್ದನಗೌಡರ ಅವರು 1.82 ಕೋಟಿ ರೂ. ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿದ್ದಾರೆ.