ಬೆಳಗಾವಿ: ಶಾಸಕರಿಗಾಗಿ ಗೋವಾದಲ್ಲಿ ರಿಸಾರ್ಟ್ಗಳನ್ನು ಬುಕ್ ಮಾಡಲಾಗಿದೆ ಎಂಬ ವರದಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ತಳ್ಳಿ ಹಾಕಿದ್ದು, ಶಾಸಕರು ರಜೆಗಾಗಿ ಪ್ರವಾಸಕ್ಕೆ ಹೋಗುವುದರಲ್ಲಿ “ಯಾವುದೇ ವಿಶೇಷತೆ ಇಲ್ಲ” ಎಂದು ಹೇಳಿದ್ದಾರೆ.
ಬೈಲಹೊಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾವುದೂ ಬುಕ್ ಮಾಡಿಲ್ಲ. ಯಾರು ಹೋಗುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ವೈಯಕ್ತಿಕ ಟೂರ್ ಹೊರಟರೆ ನಾವೇನು ಹೋಗಬೇಡಿ ಅಂತಾ ಹೇಳುವುದಕ್ಕೆ ಆಗುತ್ತಾ? ಪ್ರಶ್ನಿಸಿದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆ ಬಗ್ಗೆ ಮಾತನಾಡಿ, ಯಾರು ಫುಲ್ ಸ್ಟಾಪ್ ಇಟ್ಟಿದ್ದಾರೆ, ಯಾರೂ ಇಟ್ಟಿಲ್ಲ” ಎಂದರು. ಇದೇ ವೇಳೆ, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ನಿರಂತರ ಸಿಎಂ ಬದಲಾವಣೆ ಕೂಗಿನಿಂದ ಕಾಂಗ್ರೆಸ್ನಲ್ಲಿ ಗೊಂದಲ ಮೂಡುತ್ತಿದೆಯಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವರು, “ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಮೊನ್ನೆ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೆವು. ಹಾವೇರಿಯಲ್ಲಿ ಸಾವಿರದ ದಿನದ ಕಾರ್ಯಕ್ರಮವನ್ನೂ ಒಗ್ಗಟ್ಟಾಗಿ ಮಾಡಿದ್ದೇವೆ. ಎಲ್ಲರೂ ಒಟ್ಟಾಗಿದ್ದೇವೆ. ಯಾವುದೇ ರೀತಿ ಸರ್ಕಾರದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ, ಮತ್ತು ಭಿನ್ನಮತವೂ ಇಲ್ಲ. ಅದೇ ರೀತಿ ಈ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವೂ ಇಲ್ಲ” ಎಂದು ಸಮರ್ಥಿಸಿಕೊಂಡರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಯಾರೂ ತಡೆಯಲಾರರು ಎಂಬ ಶಾಸಕ ರವಿ ಗಾಣಿಗ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಮತ್ತು ಡಿಸಿಎಂ ಸ್ಪಷ್ಟನೆ ನೀಡಿದ ಬಳಿಕ ಮತ್ತಷ್ಟು ಟಿಪ್ಪಣಿ ಅಗತ್ಯವಿಲ್ಲ ಎಂದು ಹೇಳಿದರು. “ಎಲ್ಲಾ ಶಾಸಕರು, ಸಚಿವರು ಹಾಗೂ ನಾಯಕರು ಒಗ್ಗಟ್ಟಾಗಿದ್ದಾರೆ” ಎಂದು ಪುನರುಚ್ಚರಿಸಿದರು.
ಕರಾವಳಿ ಪ್ರದೇಶದಲ್ಲಿ ಸಮುದಾಯ ಸಂಘರ್ಷದಿಂದ ಹೂಡಿಕೆ ಕುಂಠಿತವಾಗುತ್ತಿದೆ ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಶಾಂತಿ ಸ್ಥಾಪನೆಗೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಈಗ ಶಾಂತಿಯುತ ವಾತಾವರಣ ಇದೆ. ಹೂಡಿಕೆ ಆಕರ್ಷಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುತ್ತಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇತ್ತೀಚಿಗೆ ಸಿಎಂ, ಡಿಸಿಎಂ ಅಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಮೂರು ಹೊಸ ಫೈವ್ ಸ್ಟಾರ್ ಹೋಟೆಲ್ ನಿರ್ಮಾಣ ಸೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮೋದನೆ ಕೊಟ್ಟಿದ್ದಾರೆ. ಅಲ್ಲದೇ, 70 ಕೋಟಿ ರೂ ಅನುದಾನದಲ್ಲಿ ಕಿಯೋನಿಕ್ಸ್ ಐಟಿ ಕಂಪನಿ ಸ್ಥಾಪನೆಗೂ ಅನುಮೋದನೆ ಸಿಕ್ಕಿದೆ. ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕಂಪನಿಗಳನ್ನು ಆಕರ್ಷಿಸಲು ಅವಕಾಶವಿದೆ. ಆದರೆ, ಈ ಕೋಮುವಾದದಿಂದ ಅನೇಕ ಜನರಿಗೆ ಹಿನ್ನೆಡೆ ಆಗುತ್ತಿತ್ತು. ಹಾಗಾಗಿ, ಅಲ್ಲಿಯ ಜನರಿಗೆ ತಿಳುವಳಿಕೆ ಹೇಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ.
ಸೋಷಿಯಲ್ ಮೀಡಿಯಾ ಮೂಲಕ ದ್ವೇಷ ರಾಜಕಾರಣ ಮಾಡುವ ಕೆಲಸವನ್ನು ಕೆಲ ಸಂಘಟನೆಗಳು ಮಾಡುತ್ತಿವೆ. ಅದಕ್ಕೆಲ್ಲಾ ಇತಿಶ್ರೀ ಹಾಕುವ ಕೆಲಸವನ್ನು ನಮ್ಮ ದಕ್ಷ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಸದ್ಯ ಸಾಕಷ್ಟು ಸುಧಾರಣೆ ಆಗುತ್ತಿದೆ ಎಂದು ತಿಳಿಸಿದರು.