ಬೆಂಗಳೂರು: ನಗರದ ಹೊರವಲಯದಲ್ಲಿರುವ ನಿವಾಸದಲ್ಲಿ ಪಾರ್ಶ್ವವಾಯು ಪೀಡಿತ ಆಕೆಯ ಪತಿ ಎದುರೇ 69 ವರ್ಷದ ಮಹಿಳೆಯೊಬ್ಬರನ್ನು ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿರುವ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ನೆಲಮಂಗಲದ ಪೇಟೆ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಶೋಭಾ ಅವರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿರುವ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು. ಕಳೆದ ಒಂದು ದಶಕದಿಂದ, ಅವರು ತಮ್ಮ ಗಂಡನ ಆರೈಕೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದಂಪತಿಗೆ ಮಕ್ಕಳಿರಲಿಲ್ಲ ಮತ್ತು ಏಕಾಂತ ಜೀವನವನ್ನು ನಡೆಸುತ್ತಿದ್ದರು.
ಘಟನಾ ಸ್ಥಳದ ವಿಡಿಯೋದಲ್ಲಿ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ತೋರಿಸಲಾಗಿದ್ದು, ಆಕೆಯ ಪತಿ ಪಕ್ಕದಲ್ಲಿ ಅದೇ ಹಾಸಿಗೆಯ ಮೇಲೆ ಇದ್ದರು ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತನಾಗಿರುವ ಸಗಟು ಅಂಗಡಿ ಮಾಲೀಕ ಶಿವಕುಮಾರ್, ₹8 ಲಕ್ಷ ಸಾಲ ತೀರಿಸಲು ಆಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ಆಕೆಯ ಪತಿಯ ಫಿಜಿಯೋಥೆರಪಿಸ್ಟ್ ನಿಗದಿತ ಅವಧಿಗೆ ಮನೆ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಶೋಭಾ ಅವರ ಮೃತದೇಹ ಬಿದ್ದಿರುವುದನ್ನು ಕಂಡ ವೈದ್ಯರು ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಘಟನೆ ನಡೆದ ದಿನ ಸಂಜೆ ಸುಮಾರು 4 ಗಂಟೆಗೆ, ಅದೇ ಪ್ರದೇಶದ ನಿವಾಸಿಯಾಗಿರುವ ಆರೋಪಿ ಶಿವಕುಮಾರ್, ಶೋಭಾ ಅವರು ಚಿನ್ನಾಭರಣ ಧರಿಸಿರುವುದನ್ನು ಗಮನಿಸಿದ್ದಾನೆ. ಪೂರ್ವಯೋಜಿತ ಯೋಜನೆಯೊಂದಿಗೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಯಾರಿಕೆ ನೆಪದಲ್ಲಿ ಶಿವಕುಮಾರ್ ಮನೆಯೊಳಗೆ ನುಗ್ಗಿ, ಶೋಭಾ ಅವರ ಬಳಿ ಒಂದು ಲೋಟ ನೀರು ಕೇಳಿದ್ದಾನೆ. ನೀರು ತರಲು ಒಳಗೆ ಹೋದಾಗ, ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಶೋಭಾ ವಿರೋಧಿಸಲು ಪ್ರಯತ್ನಿಸಿದಾಗ, ಆರೋಪಿ ಆಕೆಯ ಕತ್ತು ಸೀಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆ ನಂತರ, ಶಿವಕುಮಾರ್ ಸಂತ್ರಸ್ತೆ ಧರಿಸಿದ್ದ 100 ಗ್ರಾಂಗೂ ಹೆಚ್ಚು ಚಿನ್ನದ ಆಭರಣಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುವ ಮೂಲಕ, ಪೊಲೀಸರು ಶಿವಕುಮಾರ್ನನ್ನು ಪತ್ತೆಹಚ್ಚಿದ್ದಾರೆ ಎಂದು ಅವರು ಹೇಳಿದರು.