ಬೆಂಗಳೂರು: ಚಿನ್ನದ ಬೆಲೆ ಗಗನಕ್ಕೇರಿದ್ದು, ಇದರ ಬೆನ್ನಲ್ಲೇ ಖದೀಮರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಹೀಗಾಗಿ, ಚಿನ್ನದ ಆಭರಣಗಳನ್ನು ಧರಿಸುವವರು ಹೆಚ್ಚು ಜಾಗರೂಕರಾಗಿರಬೇಕಾಗಿದೆ.
ತುಮಕೂರು ನಗರದಲ್ಲಿ ಖದೀಮನೊಬ್ಬ ಭಯಾನಕ ರೀತಿಯಲ್ಲಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ.
ಕ್ಯಾತಸಂದ್ರ ಪ್ರದೇಶದ ಮೈದಾಳ ರಸ್ತೆಯಲ್ಲಿ ಚಿಲ್ಲರೆ ಅಂಗಡಿ ವೃದ್ದೆಯೊಬ್ಬರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳನೊಬ್ಬ ಕಿತ್ತು ಪರಾರಿಯಾಗಿದ್ದಾನೆ.
ಸಿಗರೇಟ್ ಖರೀದಿಸುವ ನೆಪದಲ್ಲಿ ಅಂಗಡಿ ಬಳಿ ಬಂದಿರುವ ಖದೀಮ, ಈ ವೇಳೆ ವೃದ್ಧೆ ಪಾರ್ವತಮ್ಮ ಅವರ ಮಾಂಗಲ್ಯ ಸರವನ್ನು ಕಸಿದಿದ್ದಾರೆ. ಫೆಬ್ರವರಿ 15ರ ಬೆಳಗ್ಗೆ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸಂಪೂರ್ಣ ಸೆರೆಯಾಗಿದೆ.
ಬೆಳ್ಳಂಬೆಳಗ್ಗೆ ಅಂಗಡಿ ಓಪನ್ ಮಾಡುವ ಸಮಯದಲ್ಲಿ ಬಂದ ಖದೀಮ ಸಿಗರೇಟ್ ಕೇಳುವ ನೆಪದಲ್ಲಿ ಒಳಗೆ ಬಂದು ಸರಕ್ಕೆ ಕೈ ಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಪಾರ್ವತಮ್ಮ ಕ್ಯಾತಸಂದ್ರದ ಮೈದಾಳ ರಸ್ತೆಯಲ್ಲಿರುವ ತಮ್ಮ ಚಿಕ್ಕ ಚಿಲ್ಲರೆ ಅಂಗಡಿಯನ್ನು ನಿರ್ವಹಿಸುತ್ತಿದ್ದರು. ಬೆಳಗ್ಗೆ 6:30ರ ಸುಮಾರಿಗೆ ಅಂಗಡಿ ಬಾಗಿಲು ತೆರೆದುಕೊಂಡು ಕೆಲಸ ಆರಂಭಿಸಿದ್ದರು. ಆ ಸಮಯದಲ್ಲಿ ಒಬ್ಬ ವ್ಯಕ್ತಿ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದಾನೆ. ಸಹಜವಾಗಿ ಪಾರ್ವತಮ್ಮ ಸಿಗರೇಟ್ ಕೊಡಲು ಹೊರಟಾಗ, ಕಳ್ಳನು ಹಠಾತ್ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಕೈಹಾಕಿದ್ದಾನೆ. ರಭಸದಿಂದ ಸರ ಎಳೆದಿದ್ದು, ಸರ ತುಂಡಾಗಿ ಹರಡಿದೆ. ಕಳ್ಳ ಅರ್ಧ ಭಾಗದ ಸರವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ.
ಈ ವೇಳೆ ಆಘಾತದಿಂದ ಪಾರ್ವತಮಮ ಅವರು ಕೂಗಿದ್ದು, ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕಳ್ಳ ಬಲವಾಗಿ ಎಳೆದಿದ್ದರಿಂದ ಅವರು ಬಿದ್ದು ಒದ್ದಾಡಿದರೂ ಬಿಡದೇ ಸರವನ್ನು ಕದ್ದು ಪರಾರಿಯಾಗಿದ್ದಾನೆ. ಈ ಘಟನೆಯ ವೀಡಿಯೋ ಅಂಗಡಿಯ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆಯ ನಂತರ ಪಾರ್ವತಮ್ಮ ಅವರು ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪೊಲೀಸರು ಇದೀಗ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.