ಶಿವಮೊಗ್ಗ: ಗಂಡ ಸತ್ತ ಒಂದೇ ವಾರಕ್ಕೆ ಆತನ ಪತ್ನಿಯ ಹಿಂದೆ ಬಿದ್ದ ಕಾನ್ಸ್ ಟೇಬಲ್ ಒಬ್ಬಾತ ಮೆಸೇಜ್ ಮಾಡಿ ಪೀಡಿಸಿದ್ದಾನೆ. ಪೊಲೀಸ್ ಪೇದೆಯ ಕಿರುಕುಳ ತಾಳಲಾರದೇ ಮಹಿಳೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಸಿದ್ದಾಪುರದಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮೋಹನ್, ಜಗದೀಶ್ ಅವರ ಪತ್ನಿ ಸ್ವಾತಿಗೆ ಮೆಸೇಜ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡ ಸ್ವಾತಿ, ಪೊಲೀಸ್ ಪೇದೆಯ ಫೇಸ್ಬುಕ್ ಖಾತೆಯನ್ನು ಬ್ಲಾಕ್ ಮಾಡಿದ್ದರು.
ಇದರ ಬಳಿಕ ಸ್ವಾತಿಗೆ ಮತ್ತೊಂದು ಖಾತೆಯಿಂದ ಪೇದೆ ಮೋಹನ್ ಮೆಸೇಜ್ ಮಾಡತೊಡಗಿದ್ದರು. ಇದರಿಂದ ಬೇಸತ್ತ ಸ್ವಾತಿ, ಭದ್ರಾವತಿಯ ಹೊಸ ಸಿದ್ದಾಪುರದ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದಕ್ಕೂ ಮುನ್ನ ಸ್ವಾತಿ ತನ್ನ ತಾಯಿಗೆ ವಾಟ್ಸ್ ಆಪ್ ಮೂಲಕ ಮೆಸೇಜ್ ಮಾಡಿದ್ದು, ತೀರ್ಥಹಳ್ಳಿಯ ಪೊಲೀಸ್ ಪೇದೆ ಮೋಹನ್ ಹೆಸರು ಉಲ್ಲೇಖಿಸಿದ್ದಾರೆ. ಫೇಸ್ ಬುಕ್ ನಲ್ಲಿ ಮೋಹನ್ ಎಂಬ ಪೊಲೀಸ್ ನನಗೆ ಮೆಸೇಜ್ ಮಾಡಿದ್ದರು. ಅದಕ್ಕೆ ನಾನು ಅವರನ್ನು ಬ್ಲಾಕ್ ಮಾಡಿದ್ದೆ. ಆತ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂಬುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕೆಎಸ್ಐಎಸ್ಎಫ್ನಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದ ಜಗದೀಶ್ ಮದ್ಯವ್ಯಸನಿಯಾಗಿದ್ದರು. ಜಗದೀಶ್ ಜೀವನದಲ್ಲಿ ಜಿಗುಪ್ಸೆಗೊಂಡು ಹೊಸ ಸಿದ್ದಾಪುರದ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಈ ಸಂಬಂಧ ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.