ಹುಬ್ಬಳ್ಳಿ: ಹಿಂದೂಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೇ ಭಾರತದ ಅಭಿವೃದ್ಧಿಗೆ ಪ್ರಮುಖ ಕೀಲಿ ಕೈ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.
ನಗರದಲ್ಲಿ ಹಿಂದೂ ಎಕಾನಾಮಿಕ್ಸ್ ಫೋರಂ ಆಯೋಜಿಸಿದ್ದ ನ್ಯಾಷನಲ್ ಚ್ಯಾಪ್ಟರ್ಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಟಯರ್-2 ಮತ್ತು ಟಯರ್-3 ನಗರಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ಜನಸಂಖ್ಯೆಯಲ್ಲಿ ಹಿಂದೂಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ತಮ್ಮ ಸಾಂಸ್ಕೃತಿಕ ಗುರುತನ್ನು ಜಾಗತಿಕವಾಗಿ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಇದೇ ವೇಳೆ ಬಸವಣ್ಣನವರ “ಕಾಯಕವೇ ಕೈಲಾಸ” ತತ್ತ್ವವನ್ನು ಉಲ್ಲೇಖಿಸಿ, ಶ್ರಮವೇ ಆಧುನಿಕ ಯುಗದ ಶ್ರೇಷ್ಠ ಮೌಲ್ಯ ಎಂದು ತಿಳಿಸಿದರು.
ಸಂಪತ್ತು ಕೆಲವರಲ್ಲೇ ಸೀಮಿತವಾಗದೆ ಸಮಾಜದಲ್ಲಿ ಸಮಾನವಾಗಿ ಹರಡಬೇಕು. ಅಸಮತೋಲನ ಸಮಾಜದ ಅಭಿವೃದ್ಧಿಗೆ ಹಾನಿಕಾರಕವಾಗುತ್ತದೆ. ಜ್ಞಾನವೇ ಇಂದಿನ ಯುಗದ ಪ್ರಮುಖ ಶಕ್ತಿಯಾಗಿದ್ದು, ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಯುವಜನತೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಭಾರತ 2047ರೊಳಗೆ ಮಹಾಶಕ್ತಿಯಾಗುವ ದಾರಿಯಲ್ಲಿ ಸಾಗುತ್ತಿದೆ, ಮೆಟ್ರೋ ನಗರಗಳ ಜೊತೆಗೆ ಸಣ್ಣ ಮತ್ತು ಮಧ್ಯಮ ನಗರಗಳಲ್ಲೂ ಆರ್ಥಿಕ ಬೆಳವಣಿಗೆ ಅಗತ್ಯವಿದೆ. ನಾವು ಶೂನ್ಯ ಬಂಡವಾಳದೊಂದಿಗೆ ಹುಟ್ಟಿದ್ದೇವೆ, ಆದರೂ ಸಮಾಜವು ನಮ್ಮಲ್ಲಿ ಹೂಡಿಕೆ ಮಾಡುತ್ತದೆ. ನಾವು ಪ್ರತಿಫಲ ನೀಡಬೇಕು. ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಮಾಜಿಕ ಕೊಡುಗೆ ಪರಸ್ಪರ ಕೈಜೋಡಿಸಬೇಕು ಎಂದು ಹೇಳಿದರು